ಪುತ್ತಿಗೆ ಪರ್ಯಾಯ: ಡಿ.2 ಬಾಳೆ ಮುಹೂರ್ತ
ಉಡುಪಿ ಡಿ.1: ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿಯ ಪ್ರಸಿದ್ಧ ಪರ್ಯಾಯದ ಪ್ರಯುಕ್ತ ನಡೆಸುವ ನಾಲ್ಕು ಮುಹೂರ್ತಗಳು ನಾಳೆಯಿಂದ ಆರಂಭಗೊಳ್ಳಲಿದೆ.
2024 ರಂದು ನಡೆಯುವ ಪುತ್ತಿಗೆ ಮಠದ ಪರ್ಯಾಯದ ಪ್ರಯುಕ್ತ ಪೂರ್ವ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಡಿ.2ರಂದು ನಡೆಯಲಿದೆ.
ನಾಳೆ ಬೆಳಿಗ್ಗೆ 8.20ರ ಧನುರ್ಲಗ್ನ ಸುಮುಹೂರ್ತದಲ್ಲಿ ಪುತ್ತಿಗೆ ಮಠದ ಆವರಣದಲ್ಲಿ ಬಾಳೆ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಮೆರವಣಿಗೆ, ಚಂದ್ರೇಶ್ವರ, ಅನಂತೇಶ್ವರ ಕೃಷ್ಣದರ್ಶನ ಇತ್ಯಾದಿ ನಡೆಯಲಿದೆ. ಹಾಗೂ 9 ಗಂಟೆಯಿಂದ ಶ್ರೀಗಳವರ ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
2024ರ ಜ.18 ರಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕರಕಮಲ ಸಂಜಾತರಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಸರ್ವಜ್ಞ ಪೀಠಾರೋಹಣಗೈದು ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಲಿದ್ದಾರೆ.
ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದ ಪ್ರಯುಕ್ತ ಅಷ್ಟಮಠಗಳ ಪೈಕಿ ಪರ್ಯಾಯ ನಡೆಯುವ ಮಠದಲ್ಲಿ ಬಾಳೆ ಮಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಅಂತಿಮವಾಗಿ ಭತ್ತ ಮುಹೂರ್ತ ನಡೆಯಲಿದೆ. ಪರ್ಯಾಯದ ಅವಧಿಯಲ್ಲಿ ನಿರ್ವಿಘ್ನವಾಗಿ ಭಕ್ತರಿಗೆ ಅನ್ನದಾಸೋಹ ನಡೆಸಲು ಈ ಮುಹೂರ್ತಗಳನ್ನು ನಡೆಸಲಾಗುತ್ತದೆ.