ಉಡುಪಿ: ಎಸ್.ಡಿ.ಎಂ ಕಾಲೇಜಿನ 21 ದಿನಗಳ ಕಾರ್ಯಾಗಾರ ಸಮಾಪ್ತಿ
ಉಡುಪಿ ನ.29 (ಉಡುಪಿ ಟೈಮ್ಸ್ ವರದಿ) : ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಅಹಿಂಸಾ ಫೌಂಡೇಶನ್ ನ ಫ್ರಾನ್ಸ್ ನ ವಿದ್ಯಾರ್ಥಿಗಳಿಗಾಗಿ ನ.7 ರಿಂದ ನ.25 ರವರೆಗೆ 21 ದಿನಗಳ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.
ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅವರು ಮಾತನಾಡಿ, ‘ವಿದ್ಯಾರ್ಥಿಗಳ ಆಸಕ್ತಿ ಹಾಗೂ ತತ್ಪರತೆಯನ್ನು ಶ್ಲಾಘಿಸಿ ಆಯುರ್ವೇದ ಚಿಕಿತ್ಸಾ ವೃತ್ತಿಯಲ್ಲಿ ಮಾದರಿಯಾಗಿ ತೊಡಗಿಕೊಳ್ಳುವಂತಾಗಲಿ’ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ಹಾಗೂ ಪಿ.ಎಚ್ಡಿ ಅಧ್ಯಯನ ಕೇಂದ್ರದ ಸಹ ಮುಖ್ಯಸ್ಥರಾದ ಡಾ. ಸುಚೇತ ಕುಮಾರಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಡಾ. ವೀರಕುಮಾರ ಕೆ., ಕಾರ್ಯಾಗಾರ ಸಮಿತಿಯ ಅಧ್ಯಕ್ಷರಾದ ಡಾ. ಶ್ರೀಲತಾ ಕಾಮತ್, ಸಹ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ. ರವೀಂದ್ರ ಅಂಗಡಿ ಮತ್ತು ಚೈತ್ರಾ ಹೆಬ್ಬಾರ್, ಸಹ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್, ಡಾ. ಸರಿತಾ ಟಿ., ರೆಸಿಡೆನ್ಸಿಯಲ್ ಮೆಡಿಕಲ್ ಆಫೀಸರ್ ಡಾ. ರಶ್ಮಿ ಎಚ್.ಸಿ. ಅವರು ಉಪಸ್ಥಿತರಿದ್ದರು.
ಈ ವೇಳೆ ವಿದ್ಯಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಶಾಲಕ್ಯತಂತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗಾಯತ್ರಿ ಹೆಗ್ಡೆ ಸ್ವಾಗತಿಸಿದರು. ಪ್ರಸೂತಿ ತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರೋನ್ ಸೆಬಾಸ್ಟಿಯನ್ ಕಾರ್ಯಕ್ರಮ ನಿರೂಪಿಸಿದರು. ಶರೀರ ಕ್ರಿಯಾ ವಿಭಾಗದ ಡಾ. ಅಪರ್ಣ ಕೆ. ವಂದಿಸಿದರು.