ಡಿ. 9ರಿಂದ ಶಿವಪುರದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ : ಸಮಾಲೋಚನಾ ಸಭೆ
ಹೆಬ್ರಿ ನ.28 : ಕರ್ನಾಟಕ ರಾಜ್ಯ ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಫ್ರೆಂಡ್ಸ್ ಶಿವಪುರ ಆಶ್ರಯದಲ್ಲಿ ಶಿವಪುರ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಡಿ. 9ರಿಂದ 3ದಿನಗಳ ಕಾಲ ನಡೆಯಲಿರುವ 16 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಹೊನಲು ಬೆಳಕಿನ ರಾಜ್ಯಮಟ್ಟದ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ನ ಕುರಿತ ಸಮಾಲೋಚನಾ ಸಭೆ ಶಂಕರದೇವ ದೇವಸ್ಥಾನದಲ್ಲಿ ನಡೆಯಿತು.
ಈ ವೇಳೆ ಕಬಡ್ಡಿ ಪಂದ್ಯಾಟದ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಶಿವಪುರ ಸುರೇಶ ಶೆಟ್ಟಿ ಅವರು ಮಾತನಾಡಿ, ನಮ್ಮೂರಿನ ಶಂಕರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಸುಸಂದರ್ಭದಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಸಬ್ ಜೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ಗೆ ಆತಿಥ್ಯ ವಹಿಸುವ ಅವಕಾಶ ಶಿವಪುರದ ಜನತೆಯ ಪಾಲಿಗೆ ಬಂದಿರುವುದು ಸೌಭಾಗ್ಯ. ನಾವೆಲ್ಲರೂ ಸೇರಿ ನಮ್ಮೂರಿನ ಉತ್ಸವದಂತೆ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.
ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ತಂಡಗಳು ಬರಲಿವೆ. 760 ಕ್ರೀಡಾಳುಗಳು ಆಗಮಿಸಲಿದ್ದು, ಸಕಲ ವ್ಯವಸ್ಥೆಯನ್ನು ಮಾಡಬೇಕಿದೆ.ಕಾರ್ಕಳ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಕಬಡ್ಡಿ ಪಂದ್ಯಾಟ ಆಯೋಜನಾ ಸಮಿತಿಯ ಜೊತೆಗೆ 17 ಉಪಸಮಿತಿಗಳು ಚಾಂಪಿಯನ್ ಶಿಪ್ ಯಶಸ್ವಿಗೆ ಶ್ರಮಿಸಲಿದೆ. ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿದಿನವೂ 2 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ, ಶಂಕರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ವಿವಿಧ ಪ್ರಮುಖರಾದ ನಿತ್ಯಾನಂದ ಶೆಟ್ಟಿ ಶಿವಪುರ, ಅಣ್ಣಪ್ಪ ಮುದ್ರಾಡಿ, ಚೇತನ್ ಅಜೆಕಾರು, ಪ್ರಶಾಂತ್ ಶೆಟ್ಟಿ ಕುಕ್ಕುಜೆ, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು, ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳು, ಪಂದ್ಯಾಟ ಆಯೋಜನಾ ಸಮಿತಿಯ ಅಧ್ಯಕ್ಷ ಸುಮಿತ್ ಹೆಗ್ಡೆ ಯಡ್ದೆ, ಉಪಾಧ್ಯಕ್ಷರಾದ ಜಗದೀಶ ಸೇರಿಗಾರ್ ಶಿವಪುರ, ಕೃಷ್ಣಮೂರ್ತಿ ಪೂಜಾರಿ ಶಿವಪುರ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್, ಕಾರ್ಯದರ್ಶಿ ಹರೀಶ್ ಶಿವಪುರ,ಕೋಶಾಧಿಕಾರಿ ಗಣೇಶ ಕುಲಾಲ್, ವಿಶ್ವನಾಥ ನಾಯ್ಕ್, ಸಂಘಟನಾ ಕಾರ್ಯದರ್ಶಿ ಮಹೇಶ ಕುಲಾಲ್, ಉಮೇಶ ಪೂಜಾರಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.