ರಂಗಭೂಮಿಯಿಂದ ಸೌಹಾರ್ದ ಸಮಾಜ ಸೃಷ್ಟಿ: ರಂಗ ನಿರ್ದೇಶಕ ನಿತೀಶ್ ಕೋಟ್ಯಾನ್
ಉಡುಪಿ ನ.28 (ಉಡುಪಿ ಟೈಮ್ಸ್ ವರದಿ) : ರಂಗಭೂಮಿಯಿಂದ ಸೌಹಾರ್ದ ಸಮಾಜ ಸೃಷ್ಟಿಯಾಗುತ್ತದೆ. ಕಲಾಸಕ್ತರಿಗಾಗಿ ಕಲಾವಿದರಿಂದಲೇ ಸೃಷ್ಟಿಗೊಳ್ಳುವ ಕಲಾ ಪ್ರಕಾರಗಳು ಸಿದ್ಧ ಬದ್ಧವಾದ ಸಮಷ್ಟಿ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ ಎಂದು ಯುವ ರಂಗ ನಿರ್ದೇಶಕ ನಿತೀಶ್ ಕೋಟ್ಯಾನ್ ಬಂಟ್ವಾಳ ಅವರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುಮನಸಾ ಕೊಡವೂರು ಹಮ್ಮಿಕೊಂಡಿರುವ ರಂಗಶಿಬಿರ ನಟ ನಾವೀನ್ಯದ ನಿರ್ದೇಶಕರಾಗಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ಉನ್ನತಿಯಲ್ಲಿ ರಂಗಭೂಮಿಯ ಸಹಯೋಗ ಅತ್ಯಮೂಲ್ಯವಾದುದು, ರಂಗಭೂಮಿಯ ಅಂತರ್ಯವನ್ನು ಶ್ರದ್ದೆಯಿಂದ ಅರಿತಾಗ ಇಂದಿನ ಅತ್ಯಗತ್ಯವಾದ ಸೌಹಾರ್ದ ಸಮಾಜದ ಸೃಷ್ಟಿಯು ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವ ಮನಸ್ಸುಗಳು ಸಕ್ರೀಯವಾಗಿ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಹಾಗೂ ಪ್ರಸ್ತುತ ರಂಗಭೂಮಿಯ ಬೆಳವಣಿಗೆಯಲ್ಲಿ ನಾವು ಸಕಾರಾತ್ಮಕವಾದವುಗಳನ್ನು ಮಾತ್ರ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ರಂಗಶಿಬಿರಗಳು ಅನುಭವದ ಜೊತೆಗೆ ಪ್ರತಿಭೆಯನ್ನು ವಿಕಸಿಸುತ್ತದೆ ಎಂದು ಅವರು ತಿಳಿಸಿದರು.
ಇನ್ನು 10 ದಿನಗಳ ರಂಗ ಶಿಬಿರದಲ್ಲಿ 30 ಶಿಬಿರಾರ್ಥಿಗಳು ಭಾಗವಹಿಸಿದರು. ನಿರ್ದೇಶಕ ದಿವಾಕರ್ ಕಟೀಲ್, ಅಕ್ಷತ್ ಅಮೀನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.