ಕುಂದಾಪುರ ವಕೀಲರ ಸಂಘದಲ್ಲಿ “ಸಂವಿಧಾನ ದಿನಾಚರಣೆ” ಕಾರ್ಯಕ್ರಮ
ಕುಂದಾಪುರ ನ.26 (ಉಡುಪಿ ಟೈಮ್ಸ್ ವರದಿ): ಕುಂದಾಪುರ ವಕೀಲರ ಸಂಘ, ಕುಂದಾಪುರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಇವರ ಆಶ್ರಯದಲ್ಲಿ “ಸಂವಿಧಾನ ದಿನಾಚರಣೆ” ಕಾರ್ಯಕ್ರಮವನ್ನು ಕುಂದಾಪುರ ವಕೀಲರ ಸಂಘದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ & ಸೆಷನ್ಸ್ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಸಂವಿಧಾನ ಒಂದು ಪವಿತ್ರ ಗ್ರಂಥ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದು ಹೇಳಿದರು.
ವಿಷೇಷ ಭಾಷಣಕಾರರಾಗಿ ಮಂಗಳೂರಿನಿಂದ ಆಗಮಿಸಿದ ಡಾ| ಪಿ. ಅನಂತ ಕೃಷ್ಣ ಭಟ್ ಇವರು ಸಂವಿಧಾನದ ಬಗ್ಗೆ ವಿಸ್ತಾರವಾಗಿ ಮಾತನಾಡಿ “ಸಂವಿಧಾನಕ್ಕೆ ನಾವು ಅತ್ಯಮೂಲ್ಯವಾದ ಗೌರವವನ್ನು ನೀಡಿ, ಅದರ ಆಶಯಗಳನ್ನು ಈಡೇರಿಸುವುದಲ್ಲದೇ, ಅದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ” ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾ ರಾಜು ಎನ್, ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶರಾದ ಧನೇಶ್ ಮುಗುಳಿ, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶ್ರೀಮತಿ ರೋಹಿಣಿ ಡಿ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ವಿದ್ಯಾ ಎ. ಎಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಾಗೂ ವಕೀಲರ ಸಂಘದ ಸದಸ್ಯೆ ರೇಷ್ಮಾ ಶೆಟ್ಟಿ, ವಕೀಲರ ಸಂಘದ ಉಪಾಧ್ಯಕ್ಷೆ ಬೀನಾ ಜೊಸೆಫ್ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಕೀಲರ ಸಂಘದ ಹಿರಿಯ ಸದಸ್ಯರಾದ ಕೈಲಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು.