ಕಾರ್ಕಳ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ
ಕಾರ್ಕಳ ನ.18 (ಉಡುಪಿ ಟೈಮ್ಸ್ ವರದಿ) : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ತಮಿಳುನಾಡು ಮೂಲದ ಟಿ.ಉಣ್ಣಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಮೂಲತಃ ತಮಿಳುನಾಡಿನವರಾಗಿದ್ದು ಕಾರ್ಕಳದ ನಲ್ಲೂರು ಗ್ರಾಮದ ಬೂತಬೆಟ್ಟು ಎಂಬಲ್ಲಿನ ಮುನಿರಾಜ್ ಜೈನ್ ಎಂಬವರ ರಬ್ಬರ್ ತೋಟವನ್ನು 2 ವರ್ಷದಿಂದ ಕರಾರಿಗೆ ಪಡೆದುಕೊಂಡು ರಬ್ಬರ್ ಹಾಲು ತೆಗೆದು ರಬ್ಬರ್ ಶೀಟು ಮಾಡುವ ಕೆಲಸ ಮಾಡಿಕೊಂಡಿದ್ದಾರೆ.
ಈ ರಬ್ಬರ್ ತೋಟದ ಕೆಲಸಕ್ಕಾಗಿ ವಾರದ ಹಿಂದೆ ತಮಿಳುನಾಡಿನ ತನ್ನ ಪರಿಚಯದ ಪ್ರಮೋದ್, ಮಣಿಕಂಠನ್, ಮಹೇಶ, ವಿನೋದರವರನ್ನು ಕರೆಸಿಕೊಂಡಿದ್ದರು. ಇವರು ಈ ತೋಟದ ಶೆಡ್ ನಲ್ಲಿ ವಾಸ ಮಾಡಿಕೊಂಡಿದ್ದರು. ಇವರು ನ.17 ರಂದು ರಾತ್ರಿ 9 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದೂದ್ದನ್ನು ಕಂಡು ಟಿ.ಉಣ್ಣಿ ಅವರು ಅಲ್ಲಿಗೆ ಹೋಗಿ ಗಲಾಟೆ ಮಾಡದಂತೆ ತಿಳಿ ಹೇಳಿದ್ದರು. ಇದೇ ವೇಳೆ ಪ್ರಮೋದ್ ಎಂಬಾತ ಅಂಗಳದಲ್ಲಿ ಮೂತ್ರ ಮಾಡುತ್ತಿದ್ದುದನ್ನು ಕಂಡು ಅಂಗಳದಲ್ಲಿ ಮೂತ್ರ ಮಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಆತನು ಮತ್ತು ಆತನೊಂದಿಗಿದ್ದ ಮಣಿಕಂಠ ನು ಕೋಪಗೊಂಡು ಟಿ.ಉಣ್ಣಿ ಅವರನ್ನು ದೂಡಿ ಅಲ್ಲೆ ಇದ್ದ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಪ್ರಮೋದನು ಉಣ್ಣಿ ಅವರ ದೇಹಕ್ಕೆ ಚುಚ್ಚಿ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ಮಣಿಕಂಠನೂ ಕೂಡಾ ಹಲ್ಲೆ ಮಾಡಿದ್ದಾನೆ. ಈ ಗಲಾಟೆ ಬಿಡಿಸಲು ಬಂದ ಮಹೇಶನ ಅಂಗೈಗೆ ಕೂಡಾ ಅದೇ ಕತ್ತಿಯಿಂದ ಚುಚ್ಚಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.