ಬೈಂದೂರು: ರೈಲು ಡಿಕ್ಕಿ ಹೊಡೆದು ಹಳಿ ದಾಟುತ್ತಿದ್ದ ವ್ಯಕ್ತಿ ಸಾವು
ಬೈಂದೂರು ನ.18 (ಉಡುಪಿ ಟೈಮ್ಸ್ ವರದಿ) : ಹಳಿ ದಾಟುತ್ತಿದ್ದ ವೇಳೆ ರೈಲೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಿಜೂರು ಗ್ರಾಮದ ಮೂರ್ಗೋಳಿ ಹಕ್ಲುವಿನ ಸಮೀಪದ ರೈಲ್ವೆ ಗೇಟ್ ಬಳಿ ನಡೆದಿದೆ.
ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ನಾಗ ಮೊಗವೀರ (71) ಮೃತಪಟ್ಟವರು.
ಇವರು ಎಂದಿನಂತೆ ನ.17 ರಂದು ಬೆಳಿಗ್ಗೆ ಕೆಲಸಕ್ಕೆ ಮನೆಯಿಂದ ಹೋದವರು ಕೆಲಸ ಮುಗಿಸಿ ರಾತ್ರಿ 8:20 ರ ಸುಮಾರಿಗೆ ಬಿಜೂರು ಗ್ರಾಮದ ಮೂರ್ಗೋಳಿ ಹಕ್ಲು ಎಂಬಲ್ಲಿನ ಕಾಲು ದಾರಿಯಲ್ಲಿ ನಡೆದುಕೊಂಡು ರೈಲ್ವೆ ಗೇಟ್ 73-74 ಕಿಮೀ ಕಲ್ಲಿನ ಮದ್ಯ ರೈಲ್ವೆ ಹಳಿ ದಾಟುತ್ತಿರುವ ಸಮಯ ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ನಾಗ ಮೊಗವೀರ ರವರನ್ನು ರೈಲು ಎಳೆದು ಕೊಂಡು ಹೋಗಿದ್ದು, ಅವರ ಮೃತ ದೇಹ ಚಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತರ ಮಗ ಗೌತಮ್ ಎಂಬವರು ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.