ಕಾಂಗ್ರೆಸ್ ನವರ ಮಾತಿಗೆ ಜನರು ಮರುಳಾಗಬಾರದು : ಸಿಎಂ ಬೊಮ್ಮಾಯಿ

ಚಿಕ್ಕಮಗಳೂರು , ನ.15 : ಕಾಂಗ್ರೆಸ್ ನವರ ಮಾತಿಗೆ ಜನರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಸಿದ್ದರಾಮಯ್ಯನವರು ಸಹಾನುಭೂತಿ ಪಡೆದು ಮತಯಾಚನೆ ಮಾಡಿದ ಹೇಳಿಕೆ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯದಿಂದ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ. ಆದರೆ ಇದೇ ಮಾತನ್ನು 2013 ರಲ್ಲಿ ನಾಡಿನ ಜನತೆಗೆ ಹೇಳಿ, ಜನ ಅವರನ್ನು ನಂಬಿ ಮತಹಾಕಿದ್ದರು. ಆದರೆ ಜನರ ಮತಕ್ಕೆ ಬೆಲೆ ಬಂದಿಲ್ಲ. ಕಾಂಗ್ರೆಸ್ ಆಡಳಿತವನ್ನು ಜನ ಒಪ್ಪಲಿಲ್ಲ. ಹಲವಾರು ಕೊಲೆ, ಸುಲಿಗೆ ಪ್ರಕರಣಗಳು ಸಂಭವಿಸಿತು. ಯಾವುದೇ ಸರ್ಕಾರದ ಕಾರ್ಯಕ್ರಮ ಜನರನ್ನು ತಲುಪಲಿಲ್ಲ. ಆದಕಾರಣ, 2018 ರಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನು ಅನುಭವಿಸಿತು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಎಂದು ಜನರನ್ನು ಕೇಳಿಕೊಳ್ಳುವ ಹಕ್ಕಿದೆ. ಈಗ ಮತ್ತೆ ಅವರ ಮಾತನ್ನು ನಂಬುವ ಸಂದರ್ಭವಿಲ್ಲ. ರಾಜ್ಯದ ಜನ ಜಾಗೃತರಾಗಿದ್ದು, ರಾಜಕೀಯ ಬಲ್ಲವರಾಗಿದ್ದಾರೆ ಎಂದು ತಿಳಿಸಿದರು.

ಹಾಗೂ ಮಲೆನಾಡು ಪ್ರದೇಶದಿಂದ ಭಾರತೀಯ ಜನತಾ ಪಕ್ಷದ ಜನಸಂಕಲ್ಪ ಯಾತ್ರೆಯ ಮೂರನೇ ಚರಣವನ್ನು ಪ್ರಾರಂಭಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜನಸಂಕಲ್ಪ ಯಾತ್ರೆ ಕೈಗೊಳ್ಳುವುದು ನಮ್ಮ ಪಕ್ಷದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಬೆಂಬಲ ದೊರೆಯುತ್ತಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದ ನಂತರ ಈಗ ಮಲೆನಾಡು ಭಾಗದಲ್ಲಿ ಯಾತ್ರೆ ಕೈಗೊಳ್ಳಲಾಗಿದೆ. ಈ ಜನಸಂಕಲ್ಪ ಪಕ್ಷದ ವಿಜಯಸಂಕಲ್ಪ ಯಾತ್ರೆಯಾಗಲಿದೆ ಎಂಬುದು ನಮ್ಮ ವಿಶ್ವಾಸವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!