ಮಲ್ಪೆ ಬಂದರಿನಲ್ಲಿ ನೀರಿಗೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ ನ.14(ಉಡುಪಿ ಟೈಮ್ಸ್ ವರದಿ): ಮೀನುಗಾರಿಕೆ ಸಲುವಾಗಿ ಬೋಟ್ ನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಿನ್ನೆ ಸಂಜೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಕಟ್ಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ(35) ಮೃತಪಟ್ಟವರು.
ಮೀನುಗಾರರಾಗಿದ್ದ ಇವರು ಮಲ್ಪೆಯ ಪ್ರವೀಣ್ ಕಾಂಚನ್ ರವರ ಜೈಬಲರಾಮ್ ಮೀನುಗಾರಿಕೆ ಬೋಟ್ನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರು ನಿನ್ನೆ ಸಂಜೆ 6.30ರ ಸುಮಾರಿಗೆ ಮೀನುಗಾರಿಕೆಗೆ ಹೋಗಲು ಮಲ್ಪೆ ಬಂದರಿನಲ್ಲಿ ಬೋಟ್ನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಈ ವೇಳೆ ಅವರನ್ನು ಇತರ ಮೀನುಗಾರರ ಸಹಾಯದಿಂದ ಹುಡುಕಾಡಿ ಸಂಜೆ 7:00 ಗಂಟೆ ವೇಳೆಗೆ ನೀರಿನಿಂದ ಮೇಲಕ್ಕೆ ಎತ್ತಲಾಗಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಮೃತರ ಅಣ್ಣ ದೇವದಾಸ್ ತಿಂಗಳಾಯ ಅವರು ನೀಡಿದ ಮಾಹಿತಿಯಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.