ವಿಮಾನಕ್ಕೆ ಬಳಕೆಯಾಗುವ ಪೆಟ್ರೋಲ್‍ಗೆ ಸೀಮೆ ಎಣ್ಣೆ ಕಲಬೆರಕೆ : ಅಧಿಕಾರಿಗಳಿಂದ ದಾಳಿ

ಮಂಗಳೂರು ನ.8 : ಸುರತ್ಕಲ್ ಬಳಿಯ ಬಾಳಾದಲ್ಲಿ ವಿಮಾನಕ್ಕೆ ಬಳಕೆ ಆಗುವ ಪೆಟ್ರೋಲ್ ಗೆ ಸೀಮೆ ಎಣ್ಣೆ ರಾಸಾಯನಿಕವನ್ನು ಕಲಬೆರಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಉಪನಿರ್ದೇಶಕರಾದ ಮಾಣಿಕ್ಯ, ಆಹಾರ ನಿರೀಕ್ಷ ಕೆ. ಪ್ರಮೋದ್ ಕುಮಾರ್ ಹಾಗೂ ಚರಣ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುನೀತ್ ಗಾವಂಕರ್ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿದೆ. ಹಾಗೂ ಸ್ಥಳದಲ್ಲಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡ ಅಧಿಕಾರಿಗಳು ಎರಡು ಟ್ಯಾಂಕರ್, ಪಿಕಪ್ ಸಹಿತ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಮಾನಕ್ಕೆ ಬಳಕೆ ಮಾಡುತ್ತಿದ್ದ ದುಬಾರಿ ಬೆಲೆಯ ಪೆಟ್ರೋಲ್ ಸರಬರಾಜು ಆಗುತ್ತಿದ್ದ ಟ್ಯಾಂಕರ್ ನಿಂದ ಪೆಟ್ರೋಲ್ ಕಳ್ಳತನ ಮಾಡಿ ಅದಕ್ಕೆ ಸೀಮೆ ಎಣ್ಣೆ ಕಲಬೆರಕೆ ಮಾಡುತ್ತಿದ್ದಾರೆ ಎಂಬುದಾಗಿ ದೂರು ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಪತ್ತೆಯಾಗಿದೆ. ಎರಡು ಟ್ಯಾಂಕರ್ ಗಳಿಂದ ಪೆಟ್ರೋಲ್ ನ್ನು ಗುಪ್ತವಾಗಿ ನಿರ್ಮಿಸಿದ ಟ್ಯಾಂಕ್ ಗೆ ತುಂಬಿಸಿ ಬಳಿಕ ಟ್ಯಾಂಕರ್ ಗೆ ಸೀಮೆ ಎಣ್ಣೆ ರಾಸಾಯನಿಕ ಮಿಶ್ರಣ ಮಾಡಿ ಕಲಬೆರಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!