ವೈದ್ಯಕೀಯ ವಿದ್ಯಾರ್ಥಿ ಮೃತ್ಯು ಪ್ರಕರಣ: ಸಿಬಿಐ ತನಿಖೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್
ಮಂಗಳೂರು, ನ.7 : ತಣ್ಣೀರುಬಾವಿ ಬೀಚ್ ಸಮೀಪ 8 ವರ್ಷಗಳ ಹಿಂದೆ ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿಯೋರ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಂಗಳೂರಿನಲ್ಲಿ ವಿದಾಭ್ಯಾಸ ಮಾಡುತ್ತಿದ್ದ ರೋಹಿತ್ ರಾಧಾಕೃಷ್ಣನ್ ಅವರ ಮೃತದೇಹ 2014ರ ಮಾ.23 ರಂದು ತಣ್ಣೀರುಬಾವಿ ಬೀಚ್ನ ರಸ್ತೆ ಬದಿ ಪೊದೆಗಳ ಬಳಿ ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಇದು ಅಪಘಾತ ಪ್ರಕರಣವೆಂದು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಕೀಲರಾಗಿರುವ ರೋಹಿತ್ ಅವರ ತಂದೆ ಕೇರಳ ನಿವಾಸಿ ಎಂ.ಎಸ್.ರಾಧಾಕೃಷ್ಣನ್ ಅವರು ಪ್ರಕರಣದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಈ ಬಗ್ಗೆ ಸಿಐಡಿ ತನಿಖೆ ನಡೆಸಿತ್ತು. ಸಿಐಡಿ ತನಿಖೆಯ ಬಗ್ಗೆಯೂ ರಾಧಾಕೃಷ್ಣನ್ ಅವರು ಅಸಮಾಧಾನ ವ್ಯಕ್ತಪಡಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ.
ಹಾಗೂ ಸಿಐಡಿ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರ ರಾಧಾಕೃಷ್ಣನ್ ಅವರಿಗೆ ನ್ಯಾಯಾಲಯ ವೆಚ್ಚವಾಗಿ 1 ಲಕ್ಷ ರೂ. ನಾಲ್ಕು ವಾರದೊಳಗೆ ಪಾವತಿಸಬೇಕು ಎಂದು ಸಿಐಡಿಗೆ ಆದೇಶ ಮಾಡಿದೆ.