ಕುಂದಾಪುರ: ಮಕ್ಕಳ ತಜ್ಞ ಡಾ. ವೆಂಕಟರಾಜ್ ನಿಧನ
ಕುಂದಾಪುರ, ನ.7 : ಕುಂದಾಪುರದ ಖ್ಯಾತ ಮಕ್ಕಳ ತಜ್ಞ ಡಾ. ವೆಂಕಟರಾಜ್ ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
67 ವರ್ಷದ ಡಾ. ವೆಂಕಟರಾಜ್ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ ತಿಮ್ಮಪ್ಪಯ್ಯ ಕಾರಂತ್, ಮಡದಿ ರಾಜೇಶ್ವರಿ, ಪುತ್ರ ಯುರಾಲಾಜಿಸ್ಟ್ ಡಾ. ಕಿಶನ್ ರಾಜ್, ಪುತ್ರಿ ಆಶಾಜ್ಯೋತಿ, ಸೊಸೆ ಗೈನ ಕಾಲಜಿಸ್ಟ್ ಡಾ.ರಜನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಕುಂದಾಪುರ ಮಕ್ಕಳ ತಜ್ಞರಾದ ಇವರು ಕುಂದಾಪುರ ನಗರದಲ್ಲಿ ಸ್ವಾತಿ ಕ್ಲಿನಿಕ್ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಉಪ್ಪುಂದದವರಾದ ಡಾ.ವೆಂಕಟರಾಜ್ ಅವರು, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಎಬಿಬಿಎಸ್ ಹಾಗೂ ಡಿಸಿಎಚ್ ಮುಗಿಸಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು ಎಂದು ತಿಳಿದು ಬಂದಿದೆ.