ಶಿವಮೊಗ್ಗ : ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಮಗು ಸೇರಿ ಒಂದೇ ಕುಟುಂಬದ ಮೂವರು ಮೃತ್ಯು

ಶಿವಮೊಗ್ಗ ನ.7 :  ಶಿರಾಳಕೊಪ್ಪ ಸಮೀಪದ ಮಂಚಿಕೊಪ್ಪ ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ  ನಿನ್ನೆ ರಾತ್ರಿ ನಡೆದಿದೆ.

ಹಲುಗಿನಕೊಪ್ಪದ ಜ್ಯೋತಿ (30), ಗಂಗಮ್ಮ (50) ಮತ್ತು ಸೌಜನ್ಯ (4) ಮೃತಪಟ್ಟವರು. ಅಪಘಾತದಲ್ಲಿ ಮಲ್ಲಿಕಾರ್ಜುನ ಎಂಬವರು ಗಂಭೀರ ಗಾಯಗೊಂಡಿದ್ದಾರೆ. 

ಮಲ್ಲಿಕಾರ್ಜನ, ಮಗಳು ಸೌಜನ್ಯ, ತಾಯಿ ಜ್ಯೋತಿ, ಅವರ ತಾಯಿ ಗಂಗಮ್ಮ ಬೈಕಿನಲ್ಲಿ ಶಿರಾಳಕೊಪ್ಪದಿಂದ ಹಲುಗಿನಕೊಪ್ಪದಲ್ಲಿರುವ ಮನೆಗೆ ಹೋಗುತ್ತಿದ್ದರು. ಈ ವೇಳೆ ಹಿರೆಕೆರೂರು ಕಡೆಯಿಂದ ಶಿರಾಳಕೊಪ್ಪ ಕಡೆಗೆ ತೆರಳುತ್ತಿದ್ದ ಕಾರು ಮಂಚಿಕೊಪ್ಪ ಬಳಿ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿದೆ.  ಪರಿಣಾಮ ಮಗು ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರು  ಆಸ್ಪತ್ರೆಯಲ್ಲಿ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಜ್ಯೋತಿ ಅವರು ಕೊನೆಯುಸಿರೆಳೆದಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಶಿರಾಳಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!