ಮಡಿಕೇರಿ: ಹಳೇ ವೈಷಮ್ಯ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡರಿಂದ ಹಲ್ಲೆ : ಪ್ರಕರಣ ದಾಖಲು

ಮಡಿಕೇರಿ ಸೆ.28 : ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಮುಖಂಡರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಬಿಜೆಪಿ ಮುಖಂಡರ ಹಲ್ಲೆಯಿಂದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಶ್ವಂತ್ ಹಾಗೂ ಕೋಶಾಧಿಕಾರಿ ಚಂದನ್ ಅಪ್ಪಯ್ಯ ಎಂಬವರು ಗಂಭೀರ ಗಾಯಗೊಂಡಿದ್ದು, ಇವರಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೆಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೇರಿ ತಾಲೂಕಿನ ಅರೆಕಾಡು ಸಮೀಪದ ಟೀ ಅಂಗಡಿಯೊಂದರಲ್ಲಿ ಘಟನೆ ನಡೆದಿದ್ದು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಣ್ಣ ಎಂಬವರ ಸಹೋದರಿ ಲಕ್ಷ್ಮಿ ಎಂಬವರು ನಿನ್ನೆ ದಿನ ನಿಧನ ಹೊಂದಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಶ್ವಂತ್ ಹಾಗೂ ಕೋಶಾಧಿಕಾರಿ ಚಂದನ್ ಅಪ್ಪಯ್ಯ ಎಂಬವರು ಮೃತರ ಅಂತಿಮ ದರ್ಶನ ಪಡೆದು ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಬಿಜೆಪಿ ಮುಖಂಡರಾದ ಮೂವರು ಸಹೋದರರೆನ್ನಲಾದ ಅರೆಕಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭು ಶೇಖರ್ ಹಾಗೂ ಸಹೋದರರಾದ ಅಪ್ರು ರವೀಂದ್ರ ಮತ್ತು ಆನಂದ್ ರಘು ಸೇರಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಹಳೇ ವೈಷಮ್ಯದಿಂದ ಹಲ್ಲೆ ನಡೆದಿದ್ದು, ಈ ಹಿಂದೆ ಕೂಡಾ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!