‘ನ ಖಾವುಂಗಾ, ನ ಖಾನೆ ದೂಂಗಾ’ ಎಂದು ಹೇಳಿದ ಚೌಕಿದಾರರು, ಲಿಖಿತ ದೂರು ಬಂದ ನಂತರವೂ ಯಾಕೆ ಕ್ರಮ ಕೈಗೊಂಡಿಲ್ಲ: ಸಿಪಿಐ(ಎಂ) ಪ್ರಶ್ನೆ

ಉಡುಪಿ (ಉಡುಪಿ ಟೈಮ್ಸ್ ವರದಿ): ‘ನ ಖಾವುಂಗಾ, ನ ಖಾನೆ ದೂಂಗಾ’ ಎಂದು ಹೇಳಿದ ಚೌಕಿದಾರರು, ಲಿಖಿತ ದೂರು ಬಂದ ನಂತರವೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿಪಿಐ(ಎಂ) ಪ್ರಧಾನಿ ಮೋದಿಯವರಿಗೆ ಪ್ರಶ್ನಿಸಿದೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಉಲ್ಲೇಖಿಸಿದ ಸಿಪಿಐ(ಎಂ) ಉಡುಪಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್, ತನ್ನ ಸಾವಿಗೆ ಸಚಿವ ಈಶ್ವರಪ್ಪರವರೇ ನೇರ ಹೊಣೆಗಾರರೆಂದು ಡೆತ್ ನೋಟ್ ಬರೆದಿದ್ದಾರೆ. ಮುಖ್ಯವಾಗಿ ಡೆತ್ ನೋಟ್ ನಲ್ಲಿ ಗುತ್ತಿಗೆ ಕೆಲಸದ ಸಂಬಂದ ಶೇ 40 ಕಮಿಷನ್ ಗಾಗಿ ಒತ್ತಡ ಹೇರಿದ ವಿಚಾರವನ್ನು ಪ್ರಸ್ಥಾಪಿಸಿದ್ದಾರೆನ್ನಲಾಗಿದೆ. ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಆದ್ದರಿಂದ, ರಾಜ್ಯ ಸರಕಾರ ಈ ಕೂಡಲೇ ಸಚಿವ ಈಶ್ವರಪ್ಪ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ 40 ರಷ್ಢು ಕಮಿಷನ್ ಪಡೆಯುತ್ತಿರುವುದಾಗಿ ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆಯೆಂದು, ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದುದನ್ನು ನೆನಪಿಸಿಕೊಳ್ಳಬಹುದು. ಆಗ ಸಿಪಿಐಎಂ ರಾಜ್ಯ ಸಮಿತಿಯು ಸದರಿ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಮತ್ತು ಕಾಮಗಾರಿಗಳ ಕಳಪೆತನವನ್ನು ಹಾಗೂ ಕಾಮಗಾರಿಗಳು ನಡೆಯದೇ ಬಿಲ್ ಮಾಡುವುದನ್ನು ತಡೆಯುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು.

ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆ ಕುರಿತು ಸೂಕ್ತ ಕ್ರಮವಹಿಸಿದ್ದರೆ ದೇಶಕ್ಕೆ ಗುತ್ತಿಗೆ ಸೇವೆಯನ್ನು ಒದಗಿಸುತ್ತಿದ್ದ ಒಂದು ಅಮೂಲ್ಯ ಜೀವ ಸಂತೋಷ ಪಾಟೀಲ್ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ತಡೆಯ ಬಹುದಿತ್ತು. ಇದರಿಂದಾಗಿ ಅವರ ಕುಟುಂಬ ಬೀದಿಗೆ ಬೀಳುವಂತಾಯಿತು.

ಈಗಲಾದರೂ ಇನ್ನಷ್ಠು ಗುತ್ತಿಗೆದಾರರು ಅತ್ಮಹತ್ಯೆಗಿಳಿಯದಂತೆ ಮತ್ತು ಅವರ ಕುಟುಂಬಗಳು ಬೀದಿ ಪಾಲಾಗದಂತೆ ತಡೆಯಲು ಸಂತೋಷ ಪಾಟೀಲ ಪ್ರಕರಣವೂ ಸೇರಿದಂತೆ 40% ಕಮಿಷನ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸುವಂತೆ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

Leave a Reply

Your email address will not be published. Required fields are marked *

error: Content is protected !!