ಸಿದ್ಧರಾಮಯ್ಯ, ಡಿಕೆಶಿ ಗುಂಡಿಕ್ಕಿ ಕೊಲ್ಲುವಂತೆ ಕರೆ ಹಾಗೂ ಹೇಳಿಕೆ ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ನಿರೂಪಕನ ವಿರುದ್ಧ ದೂರು

ಬೆಂಗಳೂರು ಜು.1: ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಕರೆಕೊಟ್ಟ ದಾವಣಗೆರೆಯ ವೀರಣ್ಣ ಹಾಗೂ ಹೇಳಿಕೆಯನ್ನು ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉದಯಪುರದ ಟೈಲರ್ ಹತ್ಯೆ ವಿಚಾರವಾಗಿ ಜೂನ್ 30 ರಂದು ನಡೆದ ಪಬ್ಲಿಕ್ ಟಿವಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ದಾವಣಗೆರೆಯಿಂದ ವೀರಣ್ಣ ಕರೆ ಮಾಡಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಗುಂಡಿಟ್ಟು ಸಾಯಿಸಿದರೆ ಎಲ್ಲಾ ಸರಿಹೋಗುತ್ತದೆ ಎಂದು ಹತ್ಯೆ ಮಾಡಲು ಪ್ರಚೋದನೆ ನೀಡಿರುತ್ತಾನೆ. ಆತನ ಹೇಳಿಕೆಯನ್ನು ಕಾರ್ಯಕ್ರಮ ನಿರೂಪಕ ಅರುಣ್ ಬಡಿಗೇರ್ ತೀಕ್ಷವಾಗಿ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾಗೂ ದೇಶದಾದ್ಯಂತ ಈಗಾಗಲೇ ಪರಿಸ್ಥಿತಿ ಉದ್ವಿಗ್ನವಾಗಿದ್ದು ಗೌರವಾನ್ವಿತ ಸುಪ್ರೀಂಕೋರ್ಟ್ ಕೂಡ ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತೆ ಪಬ್ಲಿಕ್ ಟಿವಿಯಲ್ಲಿ ಪ್ರಚೋದನಕಾರಿ ಕಾರ್ಯಕ್ರಮ ಪ್ರಸಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿರುವ ದಾವಣಗೆರೆ ಮೂಲದ ವೀರಣ್ಣ ಮತ್ತು ಆತನಿಗೆ ಪ್ರೋತ್ಸಾಹಿಸುವಂತೆ ವರ್ತಿಸಿರುವ ನಿರೂಪಕ ಅರುಣ್ ಬಡಿಗೇರ್ ಹಾಗೂ ಪ್ರಚೋದನಕಾರಿ ಪೋಸ್ಟ್ ಮಾಡಿರುವ ಪಬ್ಲಿಕ್ ಟಿವಿ ಫೇಸ್ಬುಕ್ ಖಾತೆ ಅಡ್ಮಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

1 thought on “ಸಿದ್ಧರಾಮಯ್ಯ, ಡಿಕೆಶಿ ಗುಂಡಿಕ್ಕಿ ಕೊಲ್ಲುವಂತೆ ಕರೆ ಹಾಗೂ ಹೇಳಿಕೆ ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ನಿರೂಪಕನ ವಿರುದ್ಧ ದೂರು

Leave a Reply

Your email address will not be published. Required fields are marked *

error: Content is protected !!