ಗಾಂಧಿ‌ ಕುಟುಂಬದ ತುತ್ತಿನ ಸೇವಕರಾದ ನಿಮಗೆ ಅವರ ಓಲೈಕೆ ಮಾಡುವುದೇ ಬದುಕಿನ ಭಾಗವಾಗಿದೆ- ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ಬೆಂಗಳೂರು: ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವ ಎನ್‌ಡಿಎ ನಿರ್ಧಾರ ಸಾಮಾಜಿಕ ನ್ಯಾಯವಲ್ಲ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಗಾಂಧಿ‌ ಕುಟುಂಬದ ತುತ್ತಿನ ಸೇವಕರಾದ ನಿಮಗೆ ಅವರ ಓಲೈಕೆ ಮಾಡುವುದೇ ಬದುಕಿನ ಭಾಗವಾಗಿದೆ ಎಂದು ಜರಿದಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ಗಾಂಧಿ‌ ಕುಟುಂಬದ ತುತ್ತಿನ ಸೇವಕರಾದ ನಿಮಗೆ ಅವರ ಓಲೈಕೆ ಮಾಡುವುದೇ ಬದುಕಿನ ಭಾಗವಾಗಿದೆ. ಒಬ್ಬ ಆದಿವಾಸಿ ಮಹಿಳೆ ರಾಷ್ಟ್ರಪತಿಯಾದರೆ ನಿಮಗೆ ಸಹಿಸಿಕೊಳ್ಳಲು ಕಷ್ಟವೇಕೆ? ಸಿದ್ದರಾಮಯ್ಯನವರೇ,  ನಿಮಗೆ ದೇವರಾಜ್ ಅರಸು ಅವರ ರೀತಿ ಕೆಲಸ ಮಾಡಲು ಸಾಧ್ಯವೇ? ಮುಖ್ಯಮಂತ್ರಿಯಾಗಿ ನೀವು ಮಾಡಿದ್ದು ಜಾತಿ ರಾಜಕಾರಣ ಮಾತ್ರವಲ್ಲವೇ?

ದೇಶದ ಮೇಲೆ ಇಂದಿರಾ ತುರ್ತು ಪರಿಸ್ಥಿತಿ ಹೇರಿದಾಗ ಆಗಿನ ರಾಷ್ಟ್ರಪತಿಗಳು ವರ್ತಿಸಿದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಯಾರು ಯಾರನ್ನು ರಬ್ಬರ್‌ ಸ್ಟ್ಯಾಂಪ್‌ ಮಾಡಿಕೊಂಡಿದ್ದರು ಎಂಬುದನ್ನು ಈ ಘಟನೆಯೊಂದ ರಿಂದಲೇ ತಿಳಿಯಬಹುದು. ಅಂದು ರಾಷ್ಟ್ರಪತಿಯನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂಬುದನ್ನು ನೆನಪಿಸಬೇಕೇ? ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್ ಸ್ಟ್ಯಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್ ಅಲ್ಲದೆ ಮತ್ತೇನು? ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ ಮೂರು ಬಾರಿ ರಾಷ್ಟ್ರಪತಿ ಚುನಾವಣೆ ನಡೆಸುವ ಅವಕಾಶ ಲಭಿಸಿದೆ. ಅಬ್ದುಲ್ ಕಲಾಂ – ಮುಸ್ಲಿಂ ಸಮುದಾಯ, ರಾಮನಾಥ್ ಕೋವಿಂದ್‌- ದಲಿತ ಸಮುದಾಯ, ದ್ರೌಪದಿ ಮುರ್ಮು- ಬುಡಕಟ್ಟು ಮಹಿಳೆ  ಈ ಆಯ್ಕೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಕಹಿಯಾಗುತ್ತಿದೆ? ಎಂದು ಬಿಜೆಪಿ ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!