ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ ಸೋದರ ಭಾಗಿ:ವಿ.ಎಸ್ ಉಗ್ರಪ್ಪ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ ನಾರಾಯಣ ಸಿ ಎನ್ ಅವರ ತಮ್ಮ ಸತೀಶ್ ಅವರ ಪಾತ್ರವಿದೆ. ಅವರು ಅಭ್ಯರ್ಥಿ ದರ್ಶನ್ ಗೌಡರಿಂದ 80 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ನೇರ ಆರೋಪ ಮಾಡಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಸಿಐಡಿ ತನಿಖೆ ತೀವ್ರವಾಗಿದ್ದು ದಿನಕ್ಕೊಂದು ಹೊಸ ವಿಷಯಗಳು ಸ್ಫೋಟವಾಗುತ್ತಿದೆ. ಅಕ್ರಮದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ನಾಯಕರು ಪ್ರಮುಖ ಅಸ್ತ್ರವಾಗಿ ತೆಗೆದುಕೊಂಡು ಆರೋಪಿಸುತ್ತಲೇ ಬಂದಿದ್ದರು. 

ಇದೀಗ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ ಅಶ್ವಥ್ ನಾರಾಯಣ ಅವರೇ ಪ್ರಭಾವ ಬೀರಿದ್ದಾರೆ, ಅವರ ತಮ್ಮ ಸತೀಶ್ ಗೌಡ ಅಭ್ಯರ್ಥಿ ದರ್ಶನ್ ಗೌಡರಿಂದ ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ವಿ ಎಸ್ ಉಗ್ರಪ್ಪ ಮಾಡಿದ್ದಾರೆ.
ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲವಾಗಿದೆ.

ಈ ವಿಚಾರದಲ್ಲಿ ಸಚಿವ ಅಶ್ವಥ್ ನಾರಾಯಣ ಮೌನವಾಗಿದ್ದಾರೆ. ಅವರ ಜಿಲ್ಲೆಯಲ್ಲಿ ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಮಾಗಡಿ ತಾಲ್ಲೂಕಿನಲ್ಲಿ ಮೂರರಿಂದ ಐವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಶ್ವಥ್ ನಾರಾಯಣ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. 

ಅಶ್ವಥ್ ನಾರಾಯಣ ಗಂಡಸ್ಥನದ ಬಗ್ಗೆ ಮಾತನಾಡಿದ್ದೀರಿ. ನಿಮಗೆ ತಾಕತ್, ಧಮ್ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಒಪ್ಪಿಸಿ. ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅಶ್ವಥ್ ನಾರಾಯಣ್ ರಾಜೀನಾಮೆಗೆ ಉಗ್ರಪ್ಪ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!