ಪಿಎಸ್ಐ ನೇಮಕ ಹಗರಣ: ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಟೂಲ್ ಕಿಟ್-ಬಿಜೆಪಿ ಟ್ವೀಟ್

ಬೆಂಗಳೂರು ಎ.26: ಇತ್ತೀಚೆಗೆ ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯ ಅಕ್ರಮ‌ ಆರೋಪ ದಿವ್ಯಾ ಹಾಗರಗಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ನಿಂತಿದ್ದ ಫೋಟೊ ಕಾಂಗ್ರೆಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿತ್ತು. ಅಲ್ಲದೇ ‘ದಿವ್ಯಾ ಹಾಗರಗಿ ಅವರ ಜೊತೆ ಆತ್ಮೀಯತೆ ಹೊಂದಿರುವಾಗ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆ ಮಾಡಿತ್ತು. 

ಇದೀಗ ಈ ಪ್ರಶ್ನೆಗೆ ತಿರುಗೇಟು ಎಂಬಂತೆ ಇದೇ ದಿವ್ಯಾ ಹಾಗರಗಿ ಜೊತೆ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಿಂತಿದ್ದ ಫೋಟೊ ಒಂದನ್ನು ಬಿಜೆಪಿ ಕರ್ನಾಟಕ ತನ್ನ ಅಧಿಕೃತ  ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಬಿಜೆಪಿಯ ಈ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಫೋಟೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡು ಕಾಂಗ್ರಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ‘ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!’ ಎಂದು ಟೀಕಿಸಿದೆ. 

ಹಾಗರಗಿಗೆ ಸೇರಿದ್ದ ಜ್ಞಾನಜ್ಯೋತಿ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಹಾಗೂ ಈಕೆಯ ಸಹಚರರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!