ಉದ್ಯಾವರ: ಆಗಸ್ಟ್ 2ರಂದು ಏಕಕಾಲಕ್ಕೆ 540 ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ

ಉಡುಪಿ (ಉಡುಪಿ ಟೈಮ್ಸ್ ವರದಿ) : ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ, ಕಥೊಲಿಕ್ ಸಭಾ ಉದ್ಯಾವರದ ಸಹಕಾರದೊಂದಿಗೆ, ದೇವಾಲಯದ ವ್ಯಾಪ್ತಿಯ 540 ಮನೆಗಳಲ್ಲಿ ಅಗಸ್ಟ್ 2 ರಂದು ಅದಿತ್ಯವಾರ ಬೆಳಿಗ್ಗೆ 10.30 ಕ್ಕೆ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು18ನೇ ಕಾರ್ಯಕ್ರಮವಾಗಿ ವನಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನಡೆಸಲು ನಿರ್ಧರಿಸಿದ್ದು, ಕೋವಿಡ್ 19 ಮುಂಜಾಗ್ರತಾ ಕ್ರಮ ವಹಿಸಿಕೊಂಡು ಪ್ರತಿ ಮನೆಗಳಲ್ಲಿ ಪರಿಸರ ಸಂರಕ್ಷಿಸುವ ಇರಾದೆಯನ್ನು ಇಟ್ಟುಕೊಂಡು ವನಮಹೋತ್ಸವ ಕಾರ್ಯಕ್ರಮ ನಡೆಸುತ್ತಿದ್ದೇವೆ.

ಆಗಸ್ಟ್ 2ರಂದು ಆದಿತ್ಯವಾರ ಬೆಳಿಗ್ಗೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅತಿ ವಂದನೀಯ ಫಾಧರ್ ದೇವಾಲಯದಲ್ಲಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮನೆಮನೆಯಲ್ಲಿ ಏಕಕಾಲಕ್ಕೆ ವನಮಹೋತ್ಸವ ಕಾರ್ಯಕ್ರಮ ಕುಟುಂಬ ಸದಸ್ಯರ ನಡುವೆ ನಡೆಯಲಿದೆ ಎಂದು ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಪ್ರಕಟನೆ ತಿಳಿಸಿದೆ. 

ಈಗಾಗಲೇ ಸುವರ್ಣ ಮಹೋತ್ಸವ ಸಮಿತಿಯು, ಕಥೊಲಿಕ್ ಸಭಾ ಉದ್ಯಾವರ ಘಟಕದ ಸಹಕಾರದೊಂದಿಗೆ ದೇವಾಲಯದ ವ್ಯಾಪ್ತಿಯ ಪ್ರತಿ ಮನೆಗಳಿಗೆ ವಿವಿಧ ಗಿಡಗಳನ್ನು ವಿತರಿಸಿದ್ದು, ಆದಿತ್ಯವಾರ ಬೆಳಿಗ್ಗೆ ಮನೆ ಮನೆಗಳಲ್ಲೂ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಮತ್ತು ವನಮಹೋತ್ಸವ ಕಾರ್ಯಕ್ರಮದ ಸಂಚಾಲಕಿ ಡೋರಾ ಅರೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!