ನರೇಂದ್ರ ಮೋದಿಗಿಂತ ಜ್ಞಾನಿಗಳು, ದೂರದೃಷ್ಟಿ ಇರುವ ಶಾಸಕರು ನಮ್ಮಲ್ಲೇ ಇದ್ದಾರೆ- ಸಂಸದ ಪ್ರತಾಪಸಿಂಹ!

ಮೈಸೂರು: ತಮ್ಮದೇ ಪಕ್ಷದ ಶಾಸಕರ ವಿರುದ್ಧ ಸಂಸದ ಪ್ರತಾಪಸಿಂಹ ಗುರುವಾರ ಕಿಡಿಕಾರಿದರು. ಮನೆಗಳಿಗೆ ನೇರ ಸಂಪರ್ಕ ಕಲ್ಪಿಸುವ ಅಡುಗೆ ಅನಿಲ ಪೈಪ್‌ಲೈನ್‌ ಅಳವಡಿಕೆ ಕಾರ್ಯಕ್ಕೆ ಒಪ್ಪಿಗೆ ನೀಡಲು ಗುರುವಾರ ಕರೆಯಲಾಗಿದ್ದ ಪಾಲಿಕೆಯ ಕೌನ್ಸಿಲ್‌ಸಭೆ ಕೋರಂ ಅಭಾವದಿಂದ ಯಾವುದೇ ಚರ್ಚೆ ನಡೆಯದೇ ಮುಕ್ತಾಯ ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮದೇ ಪಕ್ಷದ ಶಾಸಕರು ಈ ಯೋಜನೆ ವಿರೋಧಿಸಿ ಪಾಲಿಕೆ ಸದಸ್ಯರು ಸಭೆಗೆ ಹಾಜರಾಗದಂತೆ ತಡೆದಿದ್ದಾರೆ ಎಂದು ಆರೋಪಿಸಿದ ಅವರು, ಪೈಪ್‌ಲೈನ್ ಅವನು ಎಷ್ಟು ಕೊಡುತ್ತಾನೆ ಎಂದು ಕೇಳಿ ಎಲ್ಲ ವ್ಯವಸ್ಥೆ ಮಾಡುತ್ತಾನೆ. ಪಾಲಿಕೆ ಸದಸ್ಯರು ಸಭೆಗೆ ಬರಬಾರದು ಎಂದು ಹೇಳುವಂತಹ ಚಿಲ್ಲರೆ ರಾಜಕಾರಣ ಬಿಡಿ ಎಂದು ಹರಿಹಾಯ್ದರು.

ಈ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಬರಲಿದ್ದು, ಅವರೇ ಈ ಯೋಜನೆ ಉದ್ಘಾಟಿಸಲಿದ್ದರು. ಪೈಪ್‌ಲೈನ್ ಅಳವಡಿಕೆಗೆ ಕೌನ್ಸಿಲ್ ಸಭೆಯ ಒಪ್ಪಿಗೆ ಅಗತ್ಯ ಇತ್ತು.ಆದರೆ, ನಮ್ಮದೇ ಪಕ್ಷದ ಶಾಸಕರು ಕೋರಂ ಇಲ್ಲದ ರೀತಿ ನೋಡಿಕೊಂಡು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ. ಈ ಯೋಜನೆ ಬೇಡ ಎಂದು ಪತ್ರ ಬರೆಯುತ್ತಾರೆ ಎಂದು ಕಿಡಿಕಾರಿದರು.

‘ನರೇಂದ್ರ ಮೋದಿ ಅವರಿಗಿಂತ ಜ್ಞಾನಿಗಳು, ದೂರದೃಷ್ಟಿ ಇರುವ ಶಾಸಕರು ನಮ್ಮಲ್ಲೇ ಇದ್ದಾರೆ. ನರೇಂದ್ರ ಮೋದಿ ಅವರ ಬ್ಯಾನರ್ ಹಾಕಿ‘ಮೋದಿ ಯುಗ್ ಉತ್ಸವ’ಮಾಡುತ್ತಾರೆ. ಆದರೆ,ಅವರ ಯೋಜನೆಗಳನ್ನು ಜನರಿಗೆ ತಲುಪಿಸದೇ ಕೇವಲ ಬುಕ್‌ಲೆಟ್‌ ಮಾಡಿ ಬಿಡುಗಡೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಮೇಯರ್ ಸುನಂದಾ ಪ್ರತಿಕ್ರಿಯಿಸಿ, ಇದು ನನ್ನ ಅವಧಿಯ ಕೊನೆಯ ಸಭೆ. ಸದಸ್ಯರು ಬಾರದಿರುವುದಿರುವುದರಿಂದ ಕೌನ್ಸಿಲ್ ಸಭೆ ನಡೆಯಲಿಲ್ಲ. ಈ ಯೋಜನೆಗೆ ನನ್ನ ವಿರೋಧ ಇಲ್ಲ ಎಂದು ಹೇಳಿದರು. ಶಾಸಕ ಎಸ್.ಎ.ರಾಮದಾಸ್ ಅವರು ಪೈಪ್‌ಲೈನ್ ಅಳವಡಿಕೆಯಿಂದ ರಸ್ತೆಗಳು ಹಾಳಾಗುತ್ತವೆ. ಹಾಗಾಗಿ, ಅನುಮತಿ ಕೊಡಬಾರದು ಎಂದು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.”

Leave a Reply

Your email address will not be published. Required fields are marked *

error: Content is protected !!