ಉಡುಪಿ: ದೊಡ್ಡಣಗುಡ್ಡೆಯ ವಾರ್ಷಿಕ ಮಖಾಂ ಉರೂಸ್ ಸಂಪನ್ನ
ಉಡುಪಿ: ಇಲ್ಲಿಯ ದೊಡ್ಡಣಗುಡ್ಡೆಯ ಪ್ರಸಿದ್ಧ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ವಾರ್ಷಿಕ ಮಖಾಂ ಉರೂಸ್ ಸಂಪನ್ನ ಗೊಂಡಿತು. ಮೂರು ದಿನಗಳ ಕಾಲ ನಡೆದ ಉರೂಸ್ ನಲ್ಲಿ ಮುಸ್ಲಿಂ ಬಾಂಧವರು ಕೋವಿಡ್ ನಿಯಮಾವಳಿ ಅನುಸರಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮಖಾಂ ಝಿಯಾರತ್ ಮತ್ತು ಧ್ವಜಾರೋಹಣ ಮೂಲಕ ಉರೂಸ್ ಗೆ ಚಾಲನೆ ನೀಡಲಾಯಿತು. ಉರೂಸ್ ಪ್ರಯುಕ್ತ ಮೌಲಿದ್ ಪಾರಾಯಣ, ಸಂದಲ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ ಮತ್ತು ಅನ್ನದಾನ ನಡೆಯಿತು. ಸಾಮೂಹಿಕ ಪ್ರಾರ್ಥನೆ ಸಂದರ್ಭ ಕೊರೋನಾ ಮಹಾಮಾರಿ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಇಲ್ಲಿ ಹಝ್ರತ್ ಅಹ್ಮದ್ ಹಾದಿ ದರ್ಗಾ ಇದ್ದು ಮುಸ್ಲಿಂ ಬಾಂಧವರು ದರ್ಗಾ ಝಿಯಾರತ್ ನೆರವೇರಿಸಿದರು. ಕೊನೆಯ ದಿನವಾದ ಇಂದು ಸೀಮಿತ ಸಂಖ್ಯೆಯ ಬಾಂಧವರು ಸಂದಲ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಸುಗ್ರಾಸ ಭೋಜನದ ವ್ಯವಸ್ಥೆ ಮಾಡಲಾಗಿತ್ತು.