ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ಲಕ್ಷ್ಯ ಸರಕಾರದ ತಾರತಮ್ಯ ನೀತಿಗೆ ಮತ್ತೊಂದು ನಿದರ್ಶನ: ಪಿಎಫ್ಐ

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗೆಗಿನ ಘೋರ ನಿರ್ಲಕ್ಷ್ಯವು ಬಿಜೆಪಿ ಸರಕಾರ ಅಲ್ಪಸಂಖ್ಯಾತರ ವಿರುದ್ಧ ಹೊಂದಿರುವ ತಾರತಮ್ಯ ನೀತಿಗೆ ಮತ್ತೊಂದು ನಿದರ್ಶನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ಅಲ್ಪಸಂಖ್ಯಾತರ  ಅಭಿವೃದ್ಧಿಯ ಉದ್ದೇಶದೊಂದಿಗೆ 35 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ನಿಗಮವು ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲ, ಇದೊಂದು ಸರಕಾರಿ ಸ್ವಾಮ್ಯದ ಉದ್ದಿಮೆಯೂ ಆಗಿದೆ. ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲು ಈ ನಿಗಮವು ಒಂದು ಹಂತದ ವರೆಗೆ ಯಶಸ್ವಿಯೂ ಆಗಿತ್ತು. ಆದರೆ ಇದೀಗ, ಈ ನಿಗಮವು ಎನ್‌ಬಿಎಫ್‌ಸಿಗೆ ಸಂಬOಧಿಸಿದ ಪ್ರಧಾನ ವ್ಯವಹಾರ ಮಾನದಂಡಗಳನ್ನು ಪಾಲಿಸುತ್ತಿಲ್ಲ ಮತ್ತು ಆಸ್ತಿ ಆದಾಯ ಅನುಪಾತಗಳು ಕನಿಷ್ಟ ನಿಗದಿತ ಅವಶ್ಯಕತೆಗಿಂತ ಕಡಿಮೆಯಾಗಿದ್ದರಿಂದ ಎನ್‌ಬಿಎಫ್‌ಸಿ ಸ್ಥಾನಮಾನ ಕಳೆದುಕೊಂಡಿದೆ ಎಂದು ವರದಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಪತ್ರ ಬರೆದಿದ್ದರೂ, ಎನ್‌ಬಿಎಫ್‌ಸಿ ಸ್ಥಾನಮಾನ ಮತ್ತು ನೋಂದಣಿಯನ್ನು ಮರಳಿ ಪಡೆಯಲು ಸರಕಾರದ ಇಲಾಖೆ ನಿರಾಸಕ್ತಿ ತೋರಿರುವುದು ಕಂಡು ಬಂದಿದೆ. ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ಕ್ರಮೇಣ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಜೈನ, ಬೌದ್ಧ ಮತ್ತು ಸಿಖ್ ಸಮದಾಯಗಳ ವಿಶೇಷವಾಗಿ ಕೈಸ್ತರು ಮತ್ತು ಮುಸ್ಲಿಮರ ವಿರುದ್ಧದ ಪಕ್ಷಪಾತದ ಕ್ರಮವಾಗಿದೆ. ಈ ಹಿಂದೆ ಶೈಕ್ಷಣಿಕ ನೆರವಿಗಾಗಿ ರೂಪಿಸಲಾಗಿದ್ದ ಅರಿವು ಯೋಜನೆಯ ಅನುದಾನವನ್ನು ಸರಕಾರವು ನಿಧಾನವಾಗಿ ಕಡಿತಗೊಳಿಸುತ್ತಾ ಬಂದಿತ್ತು. ಅದರೊಂದಿಗೆ ಪಿ.ಎಚ್.ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನೂ ಕಡಿತಗೊಳಿಸಲಾಗಿತ್ತು. ಅದಕ್ಕೂ ಮೊದಲು ಸರಕಾರವು ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುವ ಅನುದಾನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿತ್ತು.

ಅಲ್ಪಸಂಖ್ಯಾತರ ವಿಶೇಷವಾಗಿ ಮುಸ್ಲಿಮ್ ಸಮುದಾಯದ ಗಂಭೀರ ಹಿಂದುಳಿಯುವಿಕೆಯನ್ನು ಗುರುತಿಸಿರುವ ಆಯೋಗಗಳು ಹಲವು ಕಲ್ಯಾಣ ಕಾರ್ಯಕ್ರಮಗಳಿಗೆ ಶಿಫಾರಸು ಮಾಡಿವೆ. ಆದರೆ ಬಿಜೆಪಿ ಸರಕಾರ ಮಾತ್ರ ಅಭಿವೃದ್ಧಿಗೆ ಸಂಬOಧಿಸಿದ ಉಪಕ್ರಮ ಗಳನ್ನು ತಡೆದು ಅನ್ಯಾಯ ಎಸಗುತ್ತಿದೆ ಮತ್ತು ಅಲ್ಪಸಂಖ್ಯಾತರ ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣಕ್ಕೆ ತಡೆಯೊಡ್ಡುತ್ತಿದೆ. ದೇಶದ ಅಲ್ಪಸಂಖ್ಯಾತರ ಕಲ್ಯಾಣವು ಸರಕಾರದ ಹೊಣೆಗಾರಿಕೆಯಾಗಿದೆ. ಆದುದರಿಂದ ಸರಕಾರವು ಅಲ್ಪಸಂಖ್ಯಾತರೊOದಿಗೆ ನ್ಯಾಯೋಚಿತವಾಗಿ ವರ್ತಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ತೊರೆದು ನಿಗಮವನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯನ್ನು ಖಾತರಿ ಪಡಿಸಬೇಕೆಂದು ಯಾಸಿರ್ ಹಸನ್ ಸರಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!