| ಕಾರ್ಕಳ, ನ.10 : ‘ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ’ ದೇಶ ವ್ಯಾಪ್ತಿ ಅನುಷ್ಟಾನಗೊಳಿಸಲು ಬಜರಂಗದಳ ಒತ್ತಾಯಿಸಿದೆ.
ಡಿ.12 ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಂಗಮ ಪ್ರಯುಕ್ತ ದತ್ತ ಜಯಂತಿ ಅಂಗವಾಗಿ ವಿಶ್ವಹಿಂದು ಪರಿಷತ್ ಬಜರಂಗದಳ, ಕಾರ್ಕಳ ಪ್ರಖಂಡದ ಧರ್ಮ ರಕ್ಷಾ ರಥವು ಹೊಸ್ಮಾರಿಗೆ ತಲುಪಿದ ಸಂದರ್ಭದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಪ್ರತಿಮೆಯನ್ನು ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ ಆರ್ ಅವರು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಚಂದ್ರದ್ರೋಣ ಪರ್ವತದಲ್ಲಿ ಇರುವ ದತ್ತಪೀಠದಲ್ಲಿ ನ್ಯಾಯಾಲಯದ ತೀರ್ಪಿನಂತೆ ಹಿಂದು ಧಾರ್ಮಿಕ ಆಚರಣೆಗೆ ಮುಕ್ತ ಅವಕಾಶ ನೀಡಬೇಕು. ಮತಾಂತರ ಹಾಗೂ ಗೋ ಹತ್ಯೆ ನಿಷೇಧ ಕಾಯಿದೆಯನ್ನು ದೇಶ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸ ಬೇಕು. ಆ ಮೂಲಕ ಹಿಂದುಗಳ ಭಾವನೆಗೆ ಗೌರವ ಸಿಗುವಂತಾಯಾಗಲಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಹಿಂದುಗಳ ಪವಿತ್ರ ಭೂಮಿಯಾಗಿರುವ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ವಿಮೋಚನೆಯ ಚಳುವಳಿ, ಚಂದ್ರದ್ರೋಣ ಪರ್ವತದಲ್ಲಿ ಇರುವ ದತ್ತಪೀಠದ ವಿಮೋಚನೆ ಹೋರಾಟ ಚಳುವಳಿ ಹಾಗೂ ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಯಲ್ಲಿ ಬಜರಂಗ ದಳ ಸಕ್ರಿಯಾವಾಗಿತ್ತು. ಇದರ ಹಿನ್ನಲೆಯಲ್ಲಿ ಆಯೋಧ್ಯೆಯ ಶ್ರೀರಾಮಜನ್ಮಭೂಮಿ, ದತ್ತಪೀಠ ಹಿಂದುಗಳಿಗೆ ಪಾಲಿಗೆ ದೊರೆತಿದೆ. ತತ್ವ-ಸಿದ್ಧಾಂತದಲ್ಲಿ ಸೂರ್ಯ ಚಂದ್ರ ಇರುವ ತನಕ ಬಜರಂಗದಳ ಯಾವುದೇ ಕಾರಣಕ್ಕೂ ರಾಜಿಸಂಧಾನಕ್ಕೆ ಮುಂದಾಗುವುದಿಲ್ಲ ಎಂದು ಅವರು ಸ್ವಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಪ್ರಖಂಡ ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ಕಾರ್ಕಳ ಪ್ರಖಂಡ ಉಪಾಧ್ಯಕ್ಷ ಜಗದೀಶ್ ಸಾಣೂರು, ಕಾರ್ಕಳ ಪ್ರಖಂಡ ಸಂಚಾಲಕ ಚೇತನ್ ಪೇರಲ್ಕೆ, ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಹೊಸ್ಮಾರು ವಲಯ ಅಧ್ಯಕ್ಷ ಪ್ರಶಾಂತ್ ಹೊಸ್ಮಾರು, ಸಾಪ್ತಾಹಿಕ ಪ್ರಮುಖ ಕಾರ್ಕಳ ಪ್ರಖಂಡ ಹರಿಪ್ರಸಾದ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ನೂರಾಳ್ ಬೆಟ್ಟು, ಪ್ರಶಾಂತ್ ಚಿತ್ತಾರ, ಸುರಕ್ಷಾ ಮೊದಲಾದವರು ಉಪಸ್ಥಿತರಿದ್ದರು. | |