ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಕಾಪಾಡುವ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ- ವೈಲೆಟ್‌ ಫೆಮಿನಾ

ಉಡುಪಿ: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಾಪಾಡುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆ ಇಂದು ಹೆಚ್ಚಿದೆ ಎಂದು ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಉಪನಿರೀಕ್ಷಕಿ ವೈಲೆಟ್‌ ಫೆಮಿನಾ ಹೇಳಿದರು.

ಅವರು ಬುಧವಾರ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ನೇತೃತ್ವದಲ್ಲಿ ದಿ|ತೆರೆಜಾ ಕರ್ನೆಲಿಯೋ ಕೆಮ್ಮಣ್ಣು ಹಾಗೂ ಇತರ ದಾನಿಗಳ ಪ್ರಾಯೋಜಕತ್ವದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಅನುಗುಣವಾದ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದ ರೊಂದಿಗೆ ಉತ್ತಮ ನಾಗರಿಕರಾಗಿ ಬದುಕುವ ಗುರಿ ಇಟ್ಟುಕೊಳ್ಳಬೇಕು. ಇಂದು ಸಮಾಜದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ದೌಜ್ಯರ್ನಗಳು ನಡೆದಾದ ಅದನ್ನು ಎದುರಿಸುವ ಎದೆಗಾರಿಕೆ ತೋರಬೇಕು. ಪ್ರತಿಬಾರಿ ದೌರ್ಜನ್ಯಗಳಾದಾಗ ಸಹಿಸುತ್ತಾ ಹೋಗುವುದನ್ನು ಬಿಟ್ಟು ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜಸೇವಕಿ ವೆರೋನಿಕಾ ಕರ್ನೆಲಿಯೋ ಮಾತನಾಡಿ ವಿದ್ಯಾರ್ಥಿಗಳು ಸಾಧನೆಯನ್ನು ತೋರಲು ಪರಿಶ್ರಮದೊಂದಿಗೆ ಉತ್ತಮ ಪ್ರಯತ್ನ ಮಾಡಿದಾಗ ಅದರ ಫಲಿತಾಂಶ ನಮಗೆ ಸಿಕ್ಕೆ ಸಿಗುತ್ತದೆ ಎಂದರು.ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಮಾತನಾಡಿ ವಿದ್ಯಾರ್ಥಿಗಳು ಇಂದು ಪಡೆದಿರುವ ಸಹಾಯವನ್ನು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯೊಂದಿಗೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಸುಮಾರು 51 ಮಂದಿ ವಿದ್ಯಾರ್ಥಿಗಳಿಗೆ ಒಟ್ಟು ರೂ 3 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿʼಸೋಜಾ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಡಾ|ಜೆರಾಲ್ಡ್‌ ಪಿಂಟೊ, ಮಾಜಿ ಅಧ್ಯಕ್ಷರುಗಳಾದ ವಾಲ್ಟರ್‌ ಸಿರಿಲ್‌ ಪಿಂಟೊ, ಆಲ್ಫೋನ್ಸ್‌ ಡಿಕೋಸ್ತಾ, ಎಲ್‌ ರೋಯ್‌ ಕಿರಣ್‌ ಕ್ರಾಸ್ಟೊ, ಆಲ್ವಿನ್‌ ಕ್ವಾಡ್ರಸ್‌, ಪದಾಧಿಕಾರಿಗಳಾದ ಫೆಲಿಕ್ಸ್‌ ಪಿಂಟೊ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷರಾದ ಸಂತೋಷ್‌ ಕರ್ನೆಲಿಯೋ ವಂದಿಸಿದರು, ಸಹಕಾರದ್ಯರ್ಶಿ ಒಲಿವೀಯಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!