ಮಂಗಳೂರು: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ- ವಕೀಲ ರಾಜೇಶ್ ಭಟ್ ವಿರುದ್ಧ ದೂರು

ಮಂಗಳೂರು ಅ.19: ಇಂಟರ್ನ್‍ಶಿಪ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ವಿರುದ್ಧ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ 20 ವರ್ಷದ ಸಂತ್ರಸ್ತೆ ಕಳೆದ ಆಗಸ್ಟ್ 8 ರಂದು ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ಅವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದರು. ಈ ನಡುವೆ, ರಾಜೇಶ್ ಯುವತಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದ. ಕಳೆದ ಸೆ.25 ರಂದು ತನ್ನ ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಯುವತಿ ನೀಡಿದ ದೂರಿನ ಆಧಾರದಲ್ಲಿ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಸಂತ್ರಸ್ತೆ ಮತ್ತು ವಕೀಲ ಮಾತನಾಡಿದ್ದಾರೆ ಎನ್ನಲಾಗಿರುವ 11 ನಿಮಿಷ 55 ಸೆಕೆಂಡ್ಸ್ ಇರುವ ಆಡಿಯೋವೊಂದು ವೈರಲ್ ಆಗಿದೆ. ಈ ಆಡಿಯೋದಲ್ಲಿ ಯುವತಿಯನ್ನು ಮತ್ತೆ ಕಚೇರಿಗೆ ಬರುವಂತೆ ಮತ್ತು ಮುಂದೆಂದೂ ಈ ರೀತಿ ನಡೆದು ಕೊಳ್ಳುವುದಿಲ್ಲ. ತನ್ನಿಂದ ತಪ್ಪಾಗಿದೆ, ಕ್ಷಮಿಸು ಎಂದು ವಕೀಲ ಪರಿಪರಿಯಾಗಿ ಬೇಡಿಕೊಳ್ಳುವುದು ಕೇಳಬಹುದು. ಈ ಆಡಿಯೋ ಆಧರಿಸಿ ವಕೀಲರ ವಿರುದ್ಧ ಕ್ರಮಕ್ಕೆ ಮಂಗಳೂರು ಎಬಿವಿಪಿ ಘಟಕ ಆಗ್ರಹಿಸಿತ್ತು.

ಈ ಆಡಿಯೋದಲ್ಲಿ, “ನನ್ನ ಜೀವದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನ ತಪ್ಪು ಕ್ಷಮಿಸಿ ಇಂಟರ್ನ್‍ಶಿಪ್‍ಗೆ ದಯವಿಟ್ಟು ನೀನು ಮೊದಲಿನಂತೆ ನಮ್ಮ ಕಚೇರಿಗೆ ಬಾ. ಸಂಜೆ 6 ಗಂಟೆ ಬಳಿಕ ಕಚೇರಿಯಲ್ಲಿ ಕೆಲಸ ಮಾಡಬೇಡ” ಎಂದು ಸಂತ್ರಸ್ತ ವಿದ್ಯಾರ್ಥಿನಿಗೆ ವಕೀಲ ರಾಜೇಶ್ ಭಟ್ ಕೋರಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ನೀವು ರೇಪಿಸ್ಟ್‍ಗಿಂತ ಕಡಿಮೆ ಇಲ್ಲ. ನಾನು ಕಚೇರಿಗೆ ಬರಲ್ಲ, ನಿಮ್ಮ ಮುಖ ನೋಡೋಕೆ ಇಷ್ಟವಿಲ್ಲ ಎಂದು ಸಂತ್ರಸ್ತ ಯುವತಿ ಪ್ರತಿಕ್ರಿಯೆ ನೀಡಿದ್ದಾರೆ.
ಎರಡೂ ಕೈಮುಗಿದು ಬೇಡಿಕೊಳ್ಳುತ್ತೇನೆ ದಯವಿಟ್ಟು ಕ್ಷಮಿಸಿ, ಮತ್ತೆ ಇಂಟರ್ನ್‍ಶಿಪ್‍ಗೆ ಬಾ ಎಂದು ರಾಜೇಶ್ ಭಟ್ ಹೇಳಿದಾಗ, ಕಚೇರಿಗೆ ಬಂದ್ರೆ ಕಚೇರಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಡಿಲೀಟ್ ಮಾಡುತ್ತೀರಾ? ಎಂದು ಸಂತ್ರಸ್ತೆ ಕೇಳಿದ್ದಾರೆ. ಹಾಗೂ 2 ಹೆಣ್ಣು ಮಕ್ಕಳ ತಂದೆ ಆಗಿರುವ ನೀವು ಈ ರೀತಿ ಮಾಡಿದ್ದು ತಪ್ಪು. ನನಗೆ ಇನ್ಮುಂದೆ ಫೋನ್ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿ ಸಂತ್ರಸ್ತೆ ಫೋನ್ ಕಟ್ ಮಾಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ಸಂತ್ರಸ್ತೆ ಜತೆ ಮಾತಾಡುತ್ತಾ ಕಣ್ಣೀರಿಟ್ಟಿರುವ ರಾಜೇಶ್ ಭಟ್ ಕ್ಷಮಿಸು ಎಂದು ಬೇಡಿಕೊಂಡಿರುವುದೂ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!