ಮಂಗಳೂರು: ದಸರಾ ವೀಕ್ಷಿಸಿಲು ಬಂದಿದ್ದ ಯುವಕನ ಹತ್ಯೆಗೈದ ಸ್ನೇಹಿತ
ಮಂಗಳೂರು ಅ.16 (ಉಡುಪಿ ಟೈಮ್ಸ್ ವರದಿ): ದಸರಾ ಹಬ್ಬದ ಸಲುವಾಗಿ ನಡೆದ ಪಾರ್ಟಿ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರು ನಗರದ ಪಂಪ್ವೆಲ್ ನಲ್ಲಿ ನಡೆದಿದೆ.
ಪಚ್ಚನಾಡಿ ನಿವಾಸಿ ಧನುಷ್ (20) ಕೊಲೆಯಾದ ಯುವಕ. ಸುರತ್ಕಲ್ ನಿವಾಸಿ ಜೇಸನ್ ಸ್ನೇಹಿತನಿಗೆ ಇರಿದ ಯುವಕ. ದಸರಾ ಹಬ್ಬ ಕೊನೆಯ ದಿನವಾದ ಹಿನ್ನೆಲೆ ಮಂಗಳೂರಿಗೆ ಬಂದಿದ್ದ 6 ಮಂದಿ ಸ್ನೇಹಿತರ ತಂಡ ‘ಮಂಗಳೂರು ದಸರಾ’ ವೀಕ್ಷಿಸಿ ನಗರದ ಸಾಯಿ ಪ್ಯಾಲೇಸ್ ಎಂಬ ಹೆಸರಿನ ಲಾಡ್ಜ್ ನಲ್ಲಿ ತಂಗಿದ್ದರು. ಈ ಯುವಕರು ತಡರಾತ್ರಿ 2 ಗಂಟೆವರೆಗೂ ಪಾರ್ಟಿ ಮಾಡಿದ್ದು, ಈ ನಡುವೆ ಧನುಷ್ ಮತ್ತು ಜೇಸನ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಜೇಸನ್ ಹರಿತವಾದ ಆಯುಧದಿಂದ ಧನುಷ್ ನ ಎದೆ ಭಾಗಕ್ಕೆ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಧನುಷ್ ನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಧನುಷ್ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.