| ಉಡುಪಿ ಅ.15(ಉಡುಪಿ ಟೈಮ್ಸ್ ವರದಿ): ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ವ್ಯವಸ್ಥೆಯನ್ನು ನಾಶಮಾಡುವ ಕೃತ್ಯಗಳು ಕರಾವಳಿಯಲ್ಲಿ ನಡೆದರೆ ಅವುಗಳನ್ನು ತಡೆಯುವ ಜನ ಶಕ್ತಿ ಎದ್ದು ನಿಲ್ಲಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ.
ಹಿಂದೂ ಜಾಗರಣ ವೇದಿಕೆ, ಉಡುಪಿ ಜಿಲ್ಲೆವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಿಂದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದವರೆಗೆ ನಡೆದ “ದುರ್ಗಾ ದೌಡ್” ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಹೆಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ದಿವಸ ದಿಲ್ಲಿಯಲ್ಲಿ ಆಡಿದ ಆಟ ಅರಾಜಕತೆಯನ್ನು ಹುಟ್ಟುಹಾಕುವ ಶತ್ರುಗಳ ಷಡ್ಯಂತ್ರದ ಪರಾಕಾಷ್ಠೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಬಹಳಷ್ಟು ಕಡೆ ನಡೆಯುವ ಸಾಧ್ಯತೆಯಿದೆ. ರಾಷ್ಟ್ರವಾದ ಮೇಲಕ್ಕೆ ಬರುವುದನ್ನು ನೋಡಿ ಹತಾಶರಾದ ಎಡ ವಾದಿಗಳು ಹಾಗೂ ಸಮಾಜವಾದಿಗಳು ಇಸ್ಲಾಮಿಕ್ ಮೂಲಭೂತವಾದಿಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅರಾಜಕತೆ, ಅಶಾಂತಿ, ಗೊಂದಲ, ದಂಗೆಯನ್ನು ಎಬ್ಬಿಸುವ ಮೂಲಕ ಒಂದು ವ್ಯವಸ್ಥೆಯನ್ನೇ ನಾಶ ಮಾಡುವ ಕೃತ್ಯಕ್ಕೆ
ಕೈ ಹಾಕುತ್ತಿದ್ದಾರೆ. ಮಂಗಳೂರಿನ ಸಿಎಎ ಘಟನೆ ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ ಇದರ ಒಂದು ಭಾಗವಾಗಿದೆ. ಇಂತಹ ಘಟನೆಗಳು ಇನ್ನು ಮುಂದೆ ಎಲ್ಲಿಯೂ ನಡೆಯಬಾರದು. ಒಂದು ವೇಳೆ ವ್ಯವಸ್ಥೆಯನ್ನೇ ನಾಶ ಮಾಡುವ ಇಂತಹ ಘಟನೆ ಎಲ್ಲಿಯಾದರೂ ನಡೆದರೆ ಅದೇ ಮೊದಲು ಹಾಗೂ ಅಂತ್ಯ ಎಂಬ ಜನಶಕ್ತಿ ಎದ್ದು ನಿಲ್ಲಬೇಕು ಎಂದರು.
ಈ ವೇಳೆ ಸಮಾಜದ ಹೊಣೆಗಾರಿಕೆಯೇನು ಸಮಾಜದ ಕರ್ತವ್ಯ ಏನು ಎಂದು ಪ್ರಶ್ನಿಸಿದ ಅವರು, ಆತ್ಮ ರಕ್ಷಣೆ, ಆಸ್ತಿ ರಕ್ಷಣೆ, ನಂಬಿಕೆ, ಶ್ರದ್ಧೆ, ಭಾವನೆಯ ಸಂರಕ್ಷಣೆ ಮೂಲಭೂತ ಅಧಿಕಾರ. ಪುಂಡರು ದ್ರೋಹಿಗಳು ಎಗ್ಗಿಲ್ಲದೆ ನಡೆಸುವ ದಾಳಿಯನ್ನು ತಡೆಯುವ ಸಾಮಾಜಿಕ ಶಕ್ತಿ ಗ್ರಾಮ ಗ್ರಾಮಗಳಲ್ಲಿ ಹುಟ್ಟಬೇಕು ಎಂದರು. | |