ಆಹಾರ ನೀಡಲು ವಿಳಂಬ- ರೆಸ್ಟೋರೆಂಟ್ ಮಾಲಿಕನಿಗೆ ಗುಂಡಿಕ್ಕಿದ ಸ್ವೀಗ್ಗಿ ಡೆಲಿವರಿ ಬಾಯ್!

ನೋಯ್ಡಾ ಸೆ.1: ಆರ್ಡರ್ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟೋರೆಂಟ್ ಒಳಗೆ ನುಗ್ಗಿದ ಡೆಲಿವರಿ ಬಾಯ್ ಮಾಲಿಕನಿಗೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಸುನೀಲ್ ಅಗರ್ವಾಲ್ ಕೊಲೆಯಾಗಿರುವ ವ್ಯಕ್ತಿ. ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸುನೀಲ್ ಅಗರ್ವಾಲ್ ಅವರು ಗ್ರೇಟರ್ ನೋಯ್ಡಾದ ಮಿತ್ರ ಸೊಸೈಟಿಯಲ್ಲಿ ‘ಜಾಮ್ ಜಾಮ್’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು. ಈ ರೆಸ್ಟೋರೆಂಟ್ ಗೆ ಇಂದು ಬೆಳಿಗ್ಗೆ ಚಿಕನ್ ಬಿರಿಯಾನಿ ಮತ್ತು ಪುರಿ ಸಬ್ಜಿ ಆರ್ಡರ್ ಸಂಗ್ರಹಿಸಲು ಸ್ವಿಗ್ಗಿಯ ಡೆಲಿವರಿ ಬಾಯ್ ಒಬ್ಬ ಬಂದಿದ್ದ. ಈ ವೇಳೆ ಚಿಕನ್ ಬಿರಿಯಾನಿ ಆರ್ಡರ್ ಸಿದ್ಧವಾಗಿದೆ, ಪೂರಿ ಸಬ್ಜಿ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಅಲ್ಲಿವರೆಗೂ ಕಾಯಿರಿ ಅಂತಾ ರೆಸ್ಟೋರೆಂಟ್ ಕೆಲಸಗಾರ ಹೇಳಿದ್ದಾನೆ.

ಇದರಿಂದ ಕೋಪಗೊಂಡ ಡೆಲಿವರಿ ಬಾಯ್ ಕೆಲಸಗಾರನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಆರ್ಡರ್ ನನಗೆ ಈಗಲೇ ಬೇಕು ಅಂತಾ ಗಲಾಟೆ ಮಾಡಿದ್ದಾನೆ. ಇದಲ್ಲದೆ ಕೆಲಸಗಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ನಡುವೆ ಜಗಳ ಬಿಡಿಸಲು ಸುನಿಲ್ ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಕೂಡಲೇ ತನ್ನ ಬಳಿ ಇದ್ದ ಗನ್ ನಿಂದ ಸುನಿಲ್ ಅವರ ತಲೆಗೆ ಗುಂಡು ಹಾರಿಸಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿದ್ದ ಸುನಿಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!