ಸಂವಿಧಾನದ ತಿದ್ದುಪಡಿ ಮಸೂದೆ: ಮೋದಿ ಸರ್ಕಾರಕ್ಕೆ ವಿಪಕ್ಷಗಳಿಂದ ಬೆಂಬಲ ಘೋಷಣೆ!

ನವದೆಹಲಿ: ಸಂವಿಧಾನಕ್ಕೆ 127 ನೇ ತಿದ್ದುಪಡಿ ಮಸೂದೆ- ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡುವ ಮಸೂದೆ ಅಂಗೀಕಾರವನ್ನು ಬೆಂಬಲಿಸುವುದಾಗಿ ವಿಪಕ್ಷಗಳು ಘೋಷಿಸಿವೆ. 

ರಾಜ್ಯಸಭೆ-ಲೋಕಸಭೆಗಳಲ್ಲಿನ ವಿಪಕ್ಷ ನಾಯಕರ ಸಭೆಯ ನಂತರ ಮಾತನಾಡಿರುವ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನಕ್ಕೆ 127 ನೇ ತಿದ್ದುಪಡಿ ತರುವ ಮಸೂದೆಯನ್ನು ಎಲ್ಲಾ ವಿಪಕ್ಷಗಳೂ ಬೆಂಬಲಿಸಲಿವೆ ಎಂದು ತಿಳಿಸಿದ್ದಾರೆ. 

ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡುವ ಮಸೂದೆ ಇದಾಗಿದೆ. 

ವಿಪಕ್ಷಗಳ ಕಾರ್ಯತಂತ್ರದ ಸಭೆಯಲ್ಲಿ ಈ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ತಿದ್ದುಪಡಿಯಿಂದ ರಾಜ್ಯಳಿಗೆ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವುದಕ್ಕೆ ಅಧಿಕಾರ ಮರಳಿ ಸಿಗಲಿದೆ. ಈ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸಿ 2021 ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

“ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದೆ. ಮಸೂದೆ ಮಂಡನೆ ಮಾಡಿದ ದಿನವೇ ಅಂಗೀಕರಿಸಲಾಗುತ್ತದೆ” ಎಂದು ಖರ್ಗೆ ಹೇಳಿದ್ದಾರೆ. ಸಂಸತ್ ನ ಮುಂಗಾರು ಅಧಿವೇಶನ ಕೊನೆಯ ವಾರಕ್ಕೆ ಬಂದಿದ್ದು, ಪೆಗಾಸಸ್ ಕುರಿತ ಚರ್ಚೆ ಹಾಗೂ ರೈತರ ಪ್ರತಿಭಟನೆಗಳ ವಿಷಯವಾಗಿ ಕೇಂದ್ರ ಸರ್ಕಾರವನ್ನು ಹಣಿಯುವುದಕ್ಕೆ ಕಾರ್ಯತಂತ್ರ ರೂಪಿಸಲು ವಿಪಕ್ಷಗಳು ಆ.09 ರಂದು ಸಭೆ ನಡೆಸಿದ್ದವು. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು. ಡಿಎಂಕೆ, ಟಿಎಂಸಿ, ಎನ್ ಸಿಪಿ, ಎಸ್ ಪಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಆರ್ ಜೆಡಿ, ಆಮ್ ಆದ್ಮಿ ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. 

Leave a Reply

Your email address will not be published. Required fields are marked *

error: Content is protected !!