ಮುಖ್ಯಮಂತ್ರಿ ಬದಲಾವಣೆಯಿಂದ ಬಿಜೆಪಿಯ ನೀತಿ ಬದಲಾವಣೆ ಆಗುವುದಿಲ್ಲ: ಸಿಪಿಐ(ಎಂ)

ಬಿ.ಎಸ್.ಯಡಿಯೂರಪ್ಪ ರವರು ಬಿಜೆಪಿಯ ಹೈಕಮಾಂಡ್ ನಿರ್ಧಾರದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರನ್ನು ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆಯಿಂದ ಬಿಜೆಪಿಯ ಆಡಳಿತ ನೀತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಕಾರ್ಪೊರೇಟ್ ಪರ ನೀತಿಗಳು, ಬೆಲೆ ಏರಿಕೆ, ಜನರ ಸಂಕಷ್ಟಗಳು ಮುಂದುವರಿಯಲಿದೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಡುತ್ತದೆ. ಸರಕಾರದಲ್ಲಿ ನೇತಾ ಬದಲಾವಣೆಯಲ್ಲ, ನೀತಿ ಜನರ ಪರವಾಗಿ ಬದಲಾಗಬೇಕು.

ಕಾಂಗ್ರೆಸ್ – ಜೆಡಿ(ಎಸ್) ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿದ ಬಿಜೆಪಿ ಮತ್ತು ಯಡಿಯೂರಪ್ಪ ರವರು, ಅಕ್ರಮವಾಗಿ, ಪ್ರಜಾಪ್ರಭುತ್ವ ವಿರೋಧಿಯಾಗಿ ಮತ್ತು ಕೇಂದ್ರ ಸರಕಾರ ಹಾಗೂ ರಾಜ್ಯಪಾಲರ ಕಛೇರಿಯ ಸಹಾಯದಿಂದ ಅಧಿಕಾರವನ್ನು ಸ್ವಾಧೀನ ಪಡಿಸಿಕೊಂಡಿದ್ದರು.

ಅದಾಗಲೇ, ಬಿಜೆಪಿಯೊಳಗೆ ಭುಗಿಲೆದ್ದಿದ್ದ ಅಧಿಕಾರಕ್ಕಾಗಿನ ಕಚ್ಚಾಟವನ್ನು ಶಮನ ಮಾಡುವ ಮತ್ತು ಆರ್ ಎಸ್ ಎಸ್ ಹಿಡಿತವನ್ನು ಬಲಪಡಿಸುವ ತಂತ್ರದ ಭಾಗವಾಗಿ ಹೈಕಮಾಂಡ್ ಶ್ರೀ ಯಡಿಯೂರಪ್ಪ ರವರಿಗೆ ಎರಡು ವರ್ಷಗಳ ಅಧಿಕಾರದ ಒಡಂಬಡಿಕೆ ಮಾಡಿಕೊಟ್ಟಿತ್ತು. ಆದ್ದರಿಂದಲೇ ಬಿಜೆಪಿಯೊಳಗೆ ಇನ್ನೇನು ಮತ್ತೆರಡು ತಿಂಗಳಲ್ಲಿ ಶ್ರೀ ಯಡಿಯೂರಪ್ಪ ರವರು ಒಡಂಬಡಿಕೆಯಂತೆ ರಾಜಿನಾಮೆ ನೀಡುವುದರಿಂದ ಮುಂದಿನ ಮುಖ್ಯಮಂತ್ರಿ ಯಾರಾಗ ಬೇಕೆಂಬ ಪ್ರಶ್ನೆ ಮುನ್ನೆಲೆಗೆ ಬಂದು ರಾಜ್ಯದಲ್ಲಿ ಜನತೆಯ ಮಟ್ಟಿಗೆ ಅತ್ಯಂತ ಸಂಕಷ್ಟದ ಸಮಯ (ಕೋವಿಡ್-19) ದಲ್ಲಿ ಅಸ್ಥಿರತೆ ಉಂಟಾಗುವಂತಾಯಿತು. ಯಾರ ಮೇಲೆ ಯಾರ ಹಿಡಿತವೂ ಇಲ್ಲವೆಂಬಂತೆ ಅರಾಜಕತೆ ಉಂಟಾಗಿ ಕೋವಿಡ್ ಸೋಂಕಿತರು ಸಾವಿರಾರು ಸಂಖ್ಯೆಯಲ್ಲಿ ಸಾವಿಗೀಡಾಗ ಬೇಕಾಯಿತು.

ಕರ್ನಾಟಕ ರಾಜ್ಯ ಕೋವಿಡ್ ಎರಡನೆ ಅಲೆಯಲ್ಲಿ ಸಿಲುಕಿ ತತ್ತರಿಸುತ್ತಿರುವಾಗ, ಬಿಜೆಪಿಯ ಕೆಲ ಶಾಸಕರು, ಸಂಘ ಪರಿವಾರದ ಜನರ ಆರೋಗ್ಯ ಸಂಬಂದಿ, ಔಷಧಿ, ಬೆಡ್, ಆಮ್ಲಜನಕ,ಲಸಿಕೆಗಳನ್ನು ಬ್ಲಾಕ್ ನಲ್ಲಿ ಮಾರಾಟಮಾಡಿ ಲೂಟಿಯಲ್ಲಿ ತೊಡಗಿದ್ದಾಗ, ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಅಲುಗಾಡುವಿಕೆಯ ಕಂಪನದಲ್ಲಿದ್ದರು. ಬಹುತೇಕ ಮುಖಂಡರು ಮುಖ್ಯಮಂತ್ರಿ ಗದ್ದುಗೆ ಹಿಡಿಯುವ ಕನಸಿನಲ್ಲಿ ಲಾಭಿಯಲ್ಲಿ ನಿರತರಾಗಿದ್ದರು. ಈ ಕುರಿತ ಜನತೆಯ ಒತ್ತಾಯಗಳು ಮತ್ತು ಆಕ್ರಂಧನಕ್ಕೆ ಅವರ ಕಿವಿಗಳು ಕಿವುಡಾಗಿದ್ದವು‌. ಜನತೆಯ ಸಂಕಷ್ಠಗಳು, ಸಾವುಗಳು ಆಡಳಿತ ಪಕ್ಷದ ಬಹುತೇಕ ಶಾಸಕರುಗಳಿಗೆ ಈ ಅವಧಿಯಲ್ಲಿ ಬೇಕಿರಲಿಲ್ಲ. ಬದಲಿಗೆ, ಒಡಂಬಡಿಕೆಯಂತೆ ಶ್ರೀ ಯಡಿಯೂಪ್ಪರವರ ಅವಧಿ ಮುಗಿಯುತ್ತಿದೆ. ಮತ್ತಾರು ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಚರ್ಚೆಯಲ್ಲಿ ಮುಳುಗಿ ಜನರ ಕಷ್ಟಗಳಿಗೆ ಗಮನ ನೀಡದೆ ಕಾಲ ಕಳೆಯಿತು

ಬಿಜೆಪಿ ಶಾಸಕರಿಗೆ ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆಯ ಅಧಿಕಾರವಿಲ್ಲ. ಮುಖ್ಯಮಂತ್ರಿಯ ಅಥವಾ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೆಂಬುದು ಶಾಸಕರ ಅಧಿಕಾರವಾದರೂ, ಬಿಜೆಪಿಯ ಶಾಸಕರಿಗೆ ಅಂತಹ ಅಧಿಕಾರ ಇಲ್ಲವೆಂಬುದು ಈ ಒಟ್ಪು ಪ್ರಹಸನದಲ್ಲಿ ಮತ್ತೊಮ್ಮೆ ಬಯಲಾಗಿದೆ. ಎಲ್ಲವೂ ಬಿಜೆಪಿ ಹೈ ಕಮಾಂಡ್ ಮತ್ತು ಅದರ ನಿರ್ಧೇಶಕ ಆರ್ ಎಸ್ ಎಸ್ ನಿರ್ಧರಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಸಂಸ್ಕ್ರತಿ ಎಂದು ಟೀಕಿಸುತ್ತಿದ್ದ ಬಿಜೆಪಿ ಅದೇ ಹಾದಿಯಲ್ಲಿ ಸಾಗುತ್ತಿದೆ. ಮೋದಿ ಮತ್ತು ಶಾ ಮಾತ್ರವೇ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂಬ ಮಟ್ಟಿಗೆ ತಲುಪಿದ್ದಾರೆ.

ಯಡಿಯೂರಪ್ಪ ರವರ ಸರಕಾರ ಮಾಡಿದ ಘನಂದಾರಿ ಕೆಲಸ ಎರಡು ವರ್ಷಗಳನ್ನು ಪೂರೈಸಿದ ಸರಕಾರ ಮಾಡಿದ ಭಾರಿ ಘನಂದಾರಿ ಕೆಲಸವೆಂದರೆ, ಜನತೆಯನ್ನು ತೀವ್ರ ಸಂಕಷ್ಢಕ್ಕೀಡು ಮಾಡಿ ಅವರ ಬದುಕುವ ಹಕ್ಕಿನ ಮೇಲೆ ಧಾಳಿ ಮಾಡುವುದು ಮತ್ತು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ವ್ಯಾಪಕವಾಗಿ ರಾಜ್ಯವನ್ನು ತೆರೆದಿರುವುದಾಗಿದೆ.

ಕೇಂದ್ರದಲ್ಲಿ ತಮ್ಮದೇ ಪಕ್ಷದ ಆಡಳಿತವಿದ್ದಾಗಲೂ ರಾಜ್ಯ ಅತೀವೃಷ್ಠಿ ಹಾಗೂ ಪ್ರವಾಹ, ನೆರೆ ಹಾವಳಿಗೆ ತುತ್ತಾಗಿದ್ದರೂ ಅಗತ್ಯ ನೆರವನ್ನು ಪಡೆಯಲಾಗದೇ ಕಳೆದ ವರ್ಷ ರಾಜ್ಯವನ್ನು ಸಂಕಷ್ಠದಲ್ಲಿಯೇ ಈ ಅಧಿಕಾರ ಉಳಿಕೆಗಾಗಿ ಶ್ರೀ ಯಡಿಯೂರಪ್ಪ ರವರು ಬಿಟ್ಟು ಬಿಟ್ಟಿದ್ದರು. ರಾಜ್ಯದ ಪಾಲಿನ GST ಕೂಡಾ ಬರಲಿಲ್ಲ. ಇದರಿಂದ ರಾಜ್ಯವು ಕೋವಿಡ್ ಸಂದರ್ಭದಲ್ಲಿ ತೀವ್ರ ಬಿಕ್ಕಟ್ಟು ಎದುರಿಸಬೇಕಾಯಿತು. ರೈತರ, ಕೃಷಿಕೂಲಿಕಾರರ ಕಸುಬುದಾರರ, ಕಾರ್ಮಿಕ ಬಡವರ ಇದ್ದ ಬದ್ದ ಆಸ್ತಿಗಳೆಲ್ಲಾ ಸಾಲಕ್ಕಾಗಿ ಶ್ರೀಮಂತರ ಪಾಲಾದವು.

ಈಗಲೂ ರಾಜ್ಯ ಮುಂಗಾರು ಅತೀವೃಷ್ಠಿ, ಪ್ರವಾಹ ಹಾಗೂ ನೆರೆಯ ಸಂಕಷ್ಠದಲ್ಲಿದೆ. ಅದೇ ರೀತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೊಬ್ಬರು ಮೊಟ್ಟೆ ಹಗರಣದಲ್ಲಿ ಸಿಲುಕಿರುವುದು ಬಯಲಾಗಿದೆ.

ಇಂತಹ ಸಂದರ್ಭದಲ್ಲಿ ವ್ಯಾಪಕ ವಿರೋಧದ ನಡುವೆಯೂ ರಾಜ್ಯದ ವ್ಯವಸಾಯವನ್ನು ಮತ್ತು ಫಲವತ್ತಾದ ಜಮೀನುಗಳನ್ನು ಹಾಗೂ ಹೈನುಗಾರಿಕೆ, ಕುರಿ ಸಾಕಣೆ, ಕೋಳಿ ಸಾಕಣೆ ಮುಂತಾದ ಉಪಕಸುಬುಗಳನ್ನು, ಮೀನುಗಾರಿಕೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುವ ಕ್ರಷಿ ಕಾಯಿದೆಗಳು ಮತ್ತು ದಲಿತರು, ಅಲ್ಪ ಸಂಖ್ಯಾತರು ಮುಂತಾದವರ ಆಹಾರದ ಹಕ್ಕಿನ ಮೇಲೆ ದಾಳಿ ಮಾಡುವ ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಕಾರ್ಮಿಕರನ್ನು ರೈತರನ್ನು ಬೀದಿಗೆ ದೂಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಗ್ರಾಹಕರನ್ನು ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳು ಮತ್ತು ರಾಜ್ಯದ ಕಾರ್ಮಿಕರನ್ನು ಯೆಥೆಚ್ಛವಾಗಿ ಲೂಟಿಗೊಳಪಡಿಸುವ ಕಾರ್ಮಿಕ ಸಂಹಿತೆಗಳ ಜಾರಿ, ಯಡಿಯೂರಪ್ಪ ಸರಕಾರ ತೊಡಗಿ ತನ್ನ ಜನ ವಿರೋಧಿತನವನ್ನು ಬಯಲುಗೊಳಿಸಿಕೊಂಡಿತ್ತು.

ಚಳುವಳಿಯನ್ನು ಮುನ್ನಡೆಸಿ ಪ್ರಜಾಪ್ರಭುತ್ವ ರಕ್ಷಿಸಲು ಜನತೆಗೆ ಸಿಪಿಐಎಂ ಮನವಿ ಬದಲಾದ ಮುಖ್ಯಮಂತ್ರಿಗಳು ಇದಕ್ಕೆ ಭಿನ್ನವಾಗಿರುವ ಸಾಧ್ಯತೆ ಖಂಡಿತಾ ಇಲ್ಲ. ರಾಜ್ಯದ ಜನತೆ ತನ್ನ ಸಂಕಷ್ಢ ಹಾಗೂ ಬದುಕುವ ಹಕ್ಕನ್ನು ಮತ್ತು ಪ್ರಜಾ ಸತ್ತೆಯನ್ನು ಉಳಿಸಿಕೊಳ್ಳಲು ಚಳುವಳಿಯನ್ನು ಮುನ್ನಡೆಸುವಂತೆ ಸಿಪಿಐಎಂ ಮನವಿ ಮಾಡುತ್ತದೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ

Leave a Reply

Your email address will not be published. Required fields are marked *

error: Content is protected !!