ಉಡುಪಿ: ಹಿರಿಯ ಸಂಗೀತ ಗುರು, ನಾದ ವೈಭವಂ ವಾಸುದೇವ ಭಟ್ ಅವರಿಗೆ ಸನ್ಮಾನ
ಉಡುಪಿ ಜು.28(ಉಡುಪಿ ಟೈಮ್ಸ್ ವರದಿ): ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಸಾಧಕರೊಂದಿಗೆ ನಾವು ಕಾರ್ಯಕ್ರಮದಡಿಯಲ್ಲಿ ಉಡುಪಿಯ ಹಿರಿಯ ಸಂಗೀತ ಗುರು, ನಾದ ವೈಭವಂ ವಾಸುದೇವ ಭಟ್ ಅವರನ್ನು ಇಂದ್ರಾಳಿ ಯಲ್ಲಿರುವ ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮನಿಷ್ಯನಾಗಿ ಹುಟ್ಟಿದ ಮೇಲೆ ಆದಷ್ಟು ಉತ್ತಮ ಕೆಲಸ, ಉತ್ತಮ ಚಿಂತನೆ , ಉತ್ತಮ ಕಾರ್ಯಗಳನ್ನು ಮಾಡಿದಾಗ ಬದುಕು ಸಾರ್ಥಕವಾಗುತ್ತದೆ. ಹಾಗಾಗ ಬೇಕಾದರೇ ಪರಸ್ಪರವಾಗಿ ಚಂತನೆ, ಪ್ರತಿಯೊಬ್ಬರ ಬಗ್ಗೆ ಒಳ್ಳೆಯ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು ಹಾಗೂ ತಮಗೆ ಗೌರವಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಪತ್ರಕರ್ತ ಶೇಖರ್ ಅಜೆಕಾರ್ ಅವರು ಮಾತನಾಡಿ, ನಾದ ವೈಭವಂ ವಾಸುದೇವ ಭಟ್ ಅವರು 25 ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಇವರು ಉಡುಪಿ ಹೆಸರನ್ನು ಎಲ್ಲೆಡೆ ಪಸರಿಸಿದವರು ಎಂದು ಗುಣಗಾನ ಮಾಡಿದರು. ನಾದ ವೈಭವಂ ವಾಸುದೇವ ಭಟ್ ಅವರು ಸಂಗೀತ ಗುರುವಾಗಿರುವ ಜೊತೆಗೆ ಪ್ರಾಧ್ಯಾಪಕ, ಪತ್ರಕರ್ತ ಹಾಗೂ ನಿರ್ದೇಶಕರಾಗಿದ್ದಾರೆ. ಅವರನ್ನು ಗುರುತಿಸುವಲ್ಲಿ ಆಡಳಿತ ವರ್ಗ ಎಡವಿದೆ ಎಂದರು.
ಇವರಿಗೆ ಪ್ರತಿಷ್ಠಾನದ ವತಿಯಿಂದ 10 ಸಾವಿರ ಗೌರವಧನದೊಂದಿಗೆ ಸ್ಮರಣಿಕೆ ನೀಡಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ ಅವರು ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಪೂರ್ಣಿಮ ಜನಾರ್ಧನ್, ನಾದ ವೈಭವಂ ವಾಸುದೇವ ಭಟ್ ಅವರ ಪತ್ನಿ ಸುನಂದಾ, ಮಗಳು ಶುಭಾ ಬಾಸ್ರಿ, ಸುದರ್ಶನ್ ದೇವಾಡಿಗ, ಪ್ರಶಾಂತ್ ಕಾಮತ್, ನರಸಿಂಹಮೂರ್ತಿ, ಸಂಚಾಲಕ ರವಿರಾಜ್ ಎಚ್.ಪಿ ಮೊದಲಾದವರು ಉಪಸ್ಥಿತರಿದ್ದರು.