ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಮಂಗಳವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಬುಧವಾರವೇ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ಹೈಕಮಾಂಡ್ ವೀಕ್ಷಕರಾಗಿ ನೇಮಿಸಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ರಾಜಕೀಯ ಅನುಭವ, ಚಾಣಾಕ್ಷತನ, ಮೃದು ಸ್ವಭಾವ, ಬಿಜೆಪಿ ಸೇರಿದ ಮೇಲೆ ತೋರಿದ ಪಕ್ಷ ನಿಷ್ಠೆ, ಬಿಎಸ್‍ವೈ ಕೆಜೆಪಿ ಕಟ್ಟಿದಾಗಲೂ ಬಿಜೆಪಿಯಲ್ಲೇ ಉಳಿದಿದ್ದು, ಬಿಎಸ್ ಯಡಿಯೂರಪ್ಪ ಪರಮಾಪ್ತ, ಲಿಂಗಾಯತ ಮುಖಂಡ (ಸಾದರ)ಬಸವರಾಜ ಬೊಮ್ಮಾಯಿ ಸಿಎಂ ಆಯ್ಕೆಗೆ ಕಾರಣಗಳು ಎಂದು ತಿಳಿದು ಬಂದಿದೆ.

28-01-1960 ಹುಬ್ಬಳ್ಳಿಯಲ್ಲಿ ಜನಿಸಿದ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪುತ್ರ. ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಅರವಿಂದ್ ಬೆಲ್ಲದ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರ ಹೆಸರು ಸಿಎಂ ರೇಸ್‍ನಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಬೆಲ್ಲದ್-ಬೊಮ್ಮಾಯಿ ಹೆಸರು ಫೈನಲ್ ರೇಸ್‍ನಲ್ಲಿ ಉಳಿಯಿತು. ಕೊನೆಗೆ ಯುವ ಮುಖ ಅರವಿಂದ್ ಬೆಲ್ಲದ್ ಮೆಟ್ಟಿನಿಂತು ಬಸವರಾಜ ಬೊಮ್ಮಾಯಿ ಸಿಎಂ ಗದ್ದುಗೆ ಏರಿದ್ದಾರೆ.

“ಬಿ.ಇ ಮೆಕ್ಯಾನಿಕಲ್ ಪದವೀಧರರಾಗಿರುವ ಬೊಮ್ಮಾಯಿ ಅವರು ಯುವ ಜನತಾದಳದಿಂದ ರಾಜಕೀಯ ಜೀವನ ಆರಂಭ ಮಾಡಿದ್ದರು. 1996ರಲ್ಲಿ ಸಿಎಂ ಜೆ.ಹೆಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಆಯ್ಕೆ ಆಗಿದ್ದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದರು ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಬಸವರಾಜ ಬೊಮ್ಮಾಯಿ ಅವರ ತಾಯಿಯ ಹೆಸರು ಗಂಗಮ್ಮ, ಪತ್ನಿ ಚನ್ನಮ್ಮ. ಭರತ್ ಮತ್ತು ಅದಿತಿ ಇಬ್ಬರು ಮಕ್ಕಳಿದ್ದಾರೆ.

ಬಸವರಾಜ್ ಬೊಮ್ಮಾಯಿ ವ್ಯಕ್ತಿ ಪರಿಚಯ

ಜನನ: 18-1-1960

ಜನ್ಮ ಸ್ಥಳ: ಹುಬ್ಬಳ್ಳಿ

ತಂದೆ:ಎಸ್.ಆರ್.ಬೊಮ್ಮಾಯಿ(ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ)

ತಾಯಿ: ಗಂಗಮ್ಮ ಎಸ್ ಬೊಮ್ಮಾಯಿ

ಧರ್ಮ ಪತ್ನಿ: ಚನ್ನಮ್ಮ ಪಿ ಬೊಮ್ಮಾಯಿ

ವಿದ್ಯಾಭ್ಯಾಸ: ರೋಟರಿ ಇಂಗ್ಲಿಷ್ ಶಾಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರಾಥಮಿಕ / ಮಾಧ್ಯಮಿಕ ಶಿಕ್ಷಣ,

ಪಿಯುಸಿ: ಪಿ.ಸಿ
ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಧ್ಯಯನ,

ಪದವಿ ಶಿಕ್ಷಣ:ಬಿ. ವ್ಹಿ. ಬೂಮರೆಡ್ಡಿ ತಾಂತ್ರಿಕ ‌ಮಹಾವಿದ್ಯಾಲಯದಲ್ಲಿ ಮೆಕಾನಿಕ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ.

ಪ್ರಾರಂಭದ ಉದ್ಯೋಗ: ಕೈಗಾರಿಕ ಉದ್ಯಮಿ ಹಾಗೂ 1983-85 ರವರಗೆ, ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ,ನಂತರ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಸ್ಥಾಪನೆ.

ಸಾಮಾಜಿಕ ಹಾಗೂ ರಾಜಕೀಯ ರಂಗ: ಕಾಲೇಜು ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಮತ್ತು ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಸಂಘಟನೆಗಳಲ್ಲಿ ಸತತ ಪ್ರಯತ್ನ.

1993 ರಲ್ಲಿ ಹುಬ್ಬಳ್ಳಿ ‌ನಗರದಲ್ಲಿ ರಾಜ್ಯ ಯುವ ಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆ ನೇತೃತ್ವ,

1995 ರಲ್ಲಿ ಈದ್ಗಾ ಮೈದಾನದಲ್ಲಿ ಶಾಶ್ವತ ಸಮಸ್ಯೆಗೆ ಪರಿಹಾರಕ್ಕೆ ರಾಜ್ಯ ಸರಕಾರದ ಮೂಲಕ ಪ್ರಯತ್ನ.

ಪಕ್ಷದಲ್ಲಿ ಮೊದಲ ಸ್ಥಾನ: 1995 ರಲ್ಲಿ ರಾಜ್ಯ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
2007 ರ ಜುಲೈನಲ್ಲಿ ಧಾರವಾಡದಿಂದ ನರಗುಂದದ ವರೆಗೂ 232 ಕಿ.ಮಿ. 21 ದಿನಗಳ ಕಾಲ ಬೃಹತ್ ರೈತರೊಂದಿಗೆ ಪಾದಯಾತ್ರೆ.

ರಾಜಕೀಯ ಸ್ಥಾನಮಾನ:1996 ರಿಂದ 1997 ರವಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜಿ.ಎಚ್.ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ,

31-12-1997 ಹಾಗೂ 4-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ, ಹಾವೇರಿ, ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ‌ಪರಿಷತ್ ಸದಸ್ಯರಾಗಿ ಆಯ್ಕೆ.

22-05-2008 ರಂದು ರಾಜ್ಯ ವಿಧಾನಸಭೆ ‌ನಡೆದು ಚುನಾವಣೆಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆ.

ಹಿಂತಿನ ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ/ ಡಿ.ವ್ಹಿ, ಸದಾನಂದಗೌಡ/ಜಗದೀಶ ಶೆಟ್ಟರ ಸಂಪುಟಗಳಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಸೇವೆ.

2013 ಹಾಗೂ 2018 ವಿಧಾನ ಸಭಾ ಚುನಾವಣೆ ಗೆಲುವು ಸಾಧಿಸುವ ಮೂಲಕ ಮೂರು ಬರಿ ಹ್ಯಾಟ್ರಿಕ್ ಶಾಸಕರಾಗಿ ಆಯ್ಕೆ.

ಸಧ್ಯ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೆಯ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಬಸವರಾಜ್ ಬೊಮ್ಮಾಯಿ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!