ರಾಜ್ಯದಲ್ಲಿ ಒಂದು ಹಂತದ ಅರಾಜಕ ಆಡಳಿತದ ಯುಗಾಂತ್ಯ- ಅಶೋಕ್ ಕೊಡವೂರು
ಉಡುಪಿ: ಕಳೆದ ಎರಡು ವರ್ಷಗಳ ಕಾಲ ಅಪರ ದಾರಿಯ ರಾಜಕೀಯದಲ್ಲಿ ರಾಜ್ಯವನ್ನು ಮುನ್ನಡೆಸಿದ ಮಾನ್ಯ ಮುಖ್ಯ ಮಂತ್ರಿ ಯಡಿಯೂರಪ್ಪನವರ ರಾಜೀನಾಮೆ, ರಾಜ್ಯದಲ್ಲಿ ಒಂದು ಹಂತದ ಅರಾಜಕ ಆಡಳಿತದ ಯುಗಾಂತ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಯಡಿಯೂರಪ್ಪ ಒಬ್ಬ ಚಾಣಕ್ಯ ರಾಜಕಾರಿಣಿ. ಆದರೆ ಭ್ರಷ್ಟಾಚಾರ ರಹಿತ ಜನಪರ ಆಡಳಿತ ಕೊಡುತ್ತೇನೆ ಎಂದು ಹೇಳುತ್ತಲೇ, ತಾನು ಅನಿವಾರ್ಯವಾಗಿ ಹಮ್ಮಿಕೊಂಡ ಸ್ವಜನ ಪಕ್ಷಪಾತದ ಕೌಟುಂಬಿಕ ರಾಜಕಾರಣ ಒಂದೆಡೆಯಾದರೆ, ಆರ್ ಎಸ್ ಎಸ್ ಮೂಲಭೂತವಾದಿ ಸಿದ್ಧಾಂತದ ಗುಪ್ತ ಕಾರ್ಯಸೂಚಿಗೆ ತನ್ನನ್ನು ತಾನು ತೆರೆದು ಕೊಳ್ಳದೆ ಇದ್ದದ್ದು, ಪಕ್ಷ ವರಿಷ್ಠರ ಅವಿಶ್ವಾಸಕ್ಕೆ ಕಾರಣವಾಗಿ ರಾಜೀನಾಮೆ ಕೊಡಬೇಕಾಗಿ ಬಂದಿರುವುದು ವಿಪರ್ಯಾಸ.
ಇದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ನಿರ್ವಹಣೆ, ಹಾಗೂ ನೆರೆ ಸಂತ್ರಸ್ತರ ನೆರವಿನಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿತ್ತು. ಈ ಸರಕಾರಕ್ಕೆ ಜನಪರ ಚಿಂತನೆಯ ಕಾರ್ಯಸೂಚಿ ಇರಲಿಲ್ಲ. ವಾಸ್ತವದಲ್ಲಿ ಇಲ್ಲಿ ಸಾಂವಿಧಾನಿಕ ನಿಲುವನ್ನು ಮರೆತ, ಪಕ್ಷಾಂತರಿಗಳನ್ನು ಒಳಗೊಂಡ ಒಂದು ರೀತಿಯ ಸಮ್ಮಿಶ್ರ ಸರಕಾರ ಇತ್ತೆ ಹೊರತು ಬಿಜೆಪಿಯ ಸರಕಾರವಲ್ಲ. ಆ ನೆಲೆಯಲ್ಲಿ ರಾಜ್ಯದ ಹಿತ ದೃಷ್ಠಿಯಿಂದ ಗೌರವಾನ್ವಿತ ರಾಜ್ಯಪಾಲರು ಮದ್ಯ ಪ್ರವೇಶಿಸಿ ಈ ಸರಕಾರವನ್ನು ವಜಾಗೊಳಿಸಿ ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದ್ದಾರೆ.