ಬಿಎಸ್’ವೈ ಕಣ್ಣೀರು ಹಾಕಿ ರಾಜಿನಾಮೆ ಘೋಷಣೆ!
ಬೆಂಗಳೂರು: ಬೆಂಗಳೂರು: ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷಗಳಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೊದಲಿಗೆ ಯಡಿಯೂರಪ್ಪ ಅವರು ಬಿಜೆಪಿ ಸಾಧನೆ ಕುರಿತು ಮಾತನಾಡಿದರು. ಶಿಕಾರಿಪುರಿಂದ ಬಿಜೆಪಿಯೊಂದಿಗೆ ನಾನು ಬಂದಿದ್ದೇನೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನ ಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಹೇಳಿದರು.
ಶಿಕಾರಿಪುರದ ಜನ ನನ್ನನ್ನು ಏಳು ಬಾರಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರೀಯ ನಾಯಕರು ನನ್ನನ್ನು ಬೆಂಬಲಿಸಿದ್ದಾರೆ. ಬಿಜೆಪಿ ನೀಡಿದ ಸ್ಥಾನಕ್ಕೆ, ಅವಕಾಶಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಬಳಿಕ ಭಾಷಣದ ವೇಳೆ ಭಾವುಕರಾದ ಯಡಿಯೂರಪ್ಪ ಅವರು, ತಾವು ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. ಊಟದ ಬಳಿಕ ರಾಜಭಾವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತೇನೆಂದು ಹೇಳಿದರು.
75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಆಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ.
ನಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ಅವರು ವಿಧಾನಸಭೆಗೆ ಆಯ್ಕೆಯಾದಾಗ, ವಸಂತ ಬಂಗೇರ ಅವರು ಹಠಾತ್ ಪಕ್ಷಕ್ಕೆ ಕೈಕೊಟ್ಟು ಹೊರ ಹೋದರು. ಆ ವೇಳೆ ನಾನು ಎದೆಗುಂದಲಿಲ್ಲ. ಹಿಂದಿರುಗಿ ನೋಡದೆ, ಒಬ್ಬನೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಏಕಾಂಗಿ ಹೋರಾಟ ಮಾಡಿದೆ. ಆ ಮೂಲಕ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲನಾದೆ.
ನನ್ನ ಪಕ್ಷದ ಸೇವೆ ಗಮನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗು ಅಂದಿದ್ದರು. ಆದರೆ, ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಅದನ್ನು ನಿರಾಕರಿಸಿದೆ ಎಂದು ಹೇಳಿ ಭಾವುಕರಾದರು.
ವಾಜಪೇಯಿ ಹೇಳಿದ ದಿನೆಗಳನ್ನು ನೆನೆದು ಸಿಎಂ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ಕಣ್ಣೀರು ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಬೂಕನಕೆರೆಯಲ್ಲಿ ಹುಟ್ಟಿದ ನಾನು, ಶಿವಮೊಗ್ಗದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿದೆ. ಅಂದು ಮೊದಲ ಬಾರಿಗೆ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದೇವು. ಆದ್ರೆ ನನ್ನ ಜೊತೆಯಲ್ಲಿದ್ದ ಮತ್ತೊಬ್ರು ರಾಜೀನಾಮೆ ನೀಡಿದಾಗ ಏಕಾಂಗಿಯಾಗಿ ಹೋರಾಟ ನಡೆಸಿದ್ದೇನೆ. ಅಂದು ಆಯೋಜಿಸಿದ ಕಾರ್ಯಕ್ರಮಗಳನ್ನು ನೋಡಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅಚ್ಚರಿ ವ್ಯಕ್ತಪಡಿಸಿದರು.