ಕಡೆಕಾರು: ಗುರುವಂದನಾ ಕಾರ್ಯಕ್ರಮ
ಉಡುಪಿ: ಬದುಕನ್ನು ರೂಪಿಸಿಕೊಳ್ಳಲು ಹಲವಾರು ವ್ಯಕ್ತಿಗಳು ಗುರುಗಳಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ನೆರವಾಗಿರುತ್ತಾರೆ. ಸ್ವಉದ್ಯೋಗದ ಮೂಲಕ ಜೀವನವನ್ನು ರೂಪಿಸಿಕೊಳ್ಳುವ ಕಲೆಯನ್ನು ಕಲಿಸಿ ಕೊಟ್ಟು ಇಂದು ಹಲವಾರು ಕುಟುಂಬಗಳು ಸಂತೋಷವಾಗಿರಲು ಕಾರಣೀಭೂತರಾದ ಹಲವಾರು ಹಿರಿಯರಲ್ಲಿ ಕೆಲವರನ್ನು ಇಂದು ಜುಲೈ 24 ಗುರುಪೂರ್ಣಿಮಾ ದಿನದ ಸಂದರ್ಭದಲ್ಲಿ ಕಡೆಕಾರು ಗ್ರಾಮ ಪಂಚಾಯಿತಿಯ ಕುತ್ಪಾಡಿ 11ನೇ ವಾರ್ಡಿನಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಗೌರವಿಸಲಾಯಿತು.
ಹಿರಿಯ ಅಕ್ಕಸಾಲಿಗ ವಾದಿರಾಜ ಆಚಾರ್ಯ, ವಿಶ್ವಕರ್ಮ ಸಮಾಜದ ಮುಖಂಡ ವೆಂಕಟೇಶ ಆಚಾರ್ಯ, ಹಿರಿಯ ಮೇಸ್ತ್ರಿ ಬೊಬ್ಬರ್ಯ ಜಿಡ್ಡದ ವಾಸು ಮೇಸ್ತ್ರಿ, ಕುತ್ಪಾಡಿಯ ನಾರಾಯಣ ಮೇಸ್ತ್ರಿಯವರನ್ನು ಉಡುಪಿ ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರಾದ ದಿನಕರ ಬಾಬು ಅವರ ನೇತೃತ್ವದಲ್ಲಿ ಗೃಹ ಸನ್ಮಾನ ಮಾಡಲಾಯಿತು.
ಉಡುಪಿ ನಗರ ಬಿಜೆಪಿಯ ಉಪಾಧ್ಯಕ್ಷರಾದ ಪ್ರದೀಪ್ ಚಂದ್ರ ಕುತ್ಪಾಡಿ, ಕಡೆಕಾರು ಗ್ರಾಮ ಪಂಚಾಯಿತಿಯ ಸದಸ್ಯರಾದ ರಾಘವೇಂದ್ರ ಕುತ್ಪಾಡಿ, ಸುಲೋಚನ, ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷರಾದ ಮಾಲತಿ ಶೆಟ್ಟಿ, ಅಂಬಲಪಾಡಿ ಮಹಾಶಕ್ತಿ ಕೇಂದ್ರದ ಸಹ ಸಂಚಾಲಕರಾದ ಉಮೇಶ್ ಕುತ್ಪಾಡಿ, ಬೂತ್ ಸಮಿತಿಯ ಅಧ್ಯಕ್ಷರಾದ ಶಿವಾನಂದ ಹಾಗೂ ಕಾರ್ಯದರ್ಶಿ ವಿನೋದ್ ಅವರು ಉಪಸ್ಥಿತರಿದ್ದರು.