ಮೂಡಿಗೆರೆ: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ- ಉಡುಪಿಯ ಇಬ್ಬರು ಗಂಭೀರ

ಮೂಡಿಗೆರೆ: ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು ಮಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮೂಡಿಗೆರೆ ಸಮೀಪ ಮುದ್ರೆಮನೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. 

ಕಾರು ಚಲಾಯಿಸುತ್ತಿದ್ದ ಇಕ್ಬಾಲ್ (57) ದಿಲ್ ಶಾದ್ ಭಾನು (55) ಈ ಇಬ್ಬರಿಗೆ ಗಂಭೀರವಾದ ಗಾಯವಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಅಬ್ ಸಿಯಾನ್ (24) ಅಪ್ರಾ (23) ಈ ಇಬ್ಬರಿಗೂ ಸಣ್ಣಪುಟ್ಟ ಗಾಯವಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ನಾಲ್ವರು ಉಡುಪಿ ನಗರದ ಸಂತೆಕಟ್ಟೆ ನಿವಾಸಿಗಳು.

ಸಮಾಜ ಸೇವಕ ಫಿಶ್ ಮೋಣು ಗಾಯಾಳುಗಳಿಗೆ ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!