ಮೂಡುಬೆಳ್ಳೆ ಆಂಡ್ರ್ಯೂ ಮಾರ್ಟಿಸ್ ಕೊಲೆ ಪ್ರಕರಣ-ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ
ಉಡುಪಿ, ಜು.23: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದಆಂಡ್ರ್ಯೂ ಮಾರ್ಟಿಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪೆರ್ಣಂಕಿಲ ನಿವಾಸಿ ರಾಜೇಂದ್ರ ನಾಯ್ಕ(49) ಹಾಗೂ ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ನಿವಾಸಿ ಸಂತೋಷ್ ಪೂಜಾರಿ (41) ಪ್ರಕರಣದ ಆರೋಪಿಗಳು. ಆಂಡ್ರ್ಯೂ ಮಾರ್ಟಿಸ್ ಯಾನೆ ಅಣ್ಣು ಕೊಲೆಯಾದವರು.
ಆಂಡ್ರ್ಯೂ ಕೂಲಿ ಕೆಲಸ ಮಾಡಿಕೊಂಡಿದ್ದು, ಆರೋಪಿಗಳಿಗೆ ಪರಿಚಿತರಾಗಿದ್ದರು.ಕುಡಿದ ಮತ್ತಿನಲ್ಲಿ ಅವಾಚ್ಯವಾಗಿ ನಿಂದಿಸುತ್ತಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 2019ರ ಜ. 25ರಂದು ಬೆಳಗ್ಗೆ 8:30 ಕ್ಕೆ ವೈನ್ಶಾಪ್ಗೆ ಬಂದಿದ್ದ ಆಂಡ್ರ್ಯೂ ಮಾರ್ಟಿಸ್ ಅವರನ್ನು ಶಾಮಿಯಾನ ಕೆಲಸವಿದೆ ಎಂದು ನೆಪ ಹೇಳಿ ಅಲ್ಲಿ ಮದ್ಯ ಸೇವಿಸಿ ಅಲ್ಲಿಂದ ಮತ್ತಷ್ಟು ಮದ್ಯ ಪಾರ್ಸೆಲ್ ತೆಗೆದುಕೊಂಡು ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ತಾಕಡಬೈಲಿನ ಹಾಡಿಯಲ್ಲಿ ಕೈ ಕಾಲು ಕಟ್ಟಿ, ಕೋಲಿನಿಂದ ಹೊಡೆದು ನೇಣು ಬಿಗಿದು , ಉಸಿರು ಕಟ್ಟಿಸಿ ಕೊಲೆ ಮಾಡಿದ್ದರು.ಅತಿಯಾಗಿ ಮದ್ಯ ಕುಡಿಸಿ ಸ್ನೇಹಿತರೇ ಕೊಲೆ ಮಾಡಿದ್ದರು. ಇದೀಗ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸಿದ್ದರು. ಅಂದಿನ ವೃತ್ತ ನಿರೀಕ್ಷಕ ಶಾಂತಾರಾಮ್ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ 2019 ಎ.8ರಂದು ದೋಷರೋಷಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 31 ಸಾಕ್ಷಿಗಳ ಪೈಕಿ ಪ್ರಮುಖ 12 ಸಾಕ್ಷಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿತ್ತು ಹಾಗೂ 29 ದಾಖಲೆಗಳನ್ನು ಗುರುತಿಲಾಗಿತ್ತು. ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಧೀಶ ಸುಬ್ರಹ್ಮಣ್ಯ ಜೆ.ಎನ್. ಆರೋಪಿಗಳಿಬ್ಬರನ್ನು ದೋಷಿಗಳೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ . ಪ್ರಕರಣದ ವಿಚಾರಣೆಯಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.