ಯಾರನ್ನು ಸಿಎಂ ಮಾಡಬೇಕೆಂದು ಸಲಹೆ, ಶಿಫಾರಸು ಮಾಡಲ್ಲ – ಯಡಿಯೂರಪ್ಪ
ಬೆಂಗಳೂರು ಜು.22: ರಾಜೀನಾಮೆ ನೀಡುವುದಾಗಿ 2 ತಿಂಗಳ ಹಿಂದೆಯೇ ಹೇಳಿದ್ದೆ. ಆದರೆ ಯಾರನ್ನು ಸಿಎಂ ಮಾಡಬೇಕೆಂದು ಸಲಹೆ, ಶಿಫಾರಸು ಮಾಡುವುದಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಸಿಎಂ ಬದಲಾವಣೆ ಕುರಿತಾಗಿ ಮಾತನಾಡಿರುವ ಅವರು, ರಾಜೀನಾಮೆ ನೀಡುವುದಾಗಿ 2 ತಿಂಗಳ ಹಿಂದೆಯೇ ಹೇಳಿದ್ದೆ. ಹೈಕಮಾಂಡ್ನಿಂದ ನನಗೆ ಇನ್ನೂ ಅಧಿಕೃತ ಸೂಚನೆ ಬಂದಿಲ್ಲ. ಜು. 25 ರಂದು ಹೈಕಮಾಂಡ್ನಿಂದ ಸಂದೇಶ ಬರುತ್ತದೆ. ಅದರಂತೆ ಜು.26 ರಂದು ನಾನು ನಡೆದುಕೊಳ್ಳುವೆ. ಹಾಗಾಗಿ 25 ರ ಬಳಿಕ ಬರುವ ಸಂದೇಶಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಸುಳಿವನ್ನು ಅವರು ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸಿಎಂ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಇದೇ ವೇಳೆ, ಹೈಕಮಾಂಡ್ ಹೇಳುವವರೆಗೂ ಸಿಎಂ ಸ್ಥಾನದಲ್ಲಿರುತ್ತೇನೆ. ಬಳಿಕ ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಆದರೆ ಯಾರ ಹೆಸರನ್ನೂ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡುವುದಿಲ್ಲ. ಈ ಬಗ್ಗೆ ಹೆಸರು ಸೂಚಿಸಲು ಕೇಳಿದರೂ ನಾನು ಹೇಳುವುದಿಲ್ಲ. ಅದರ ಅಗತ್ಯವೂ ನನಗೆ ಇಲ್ಲ ಎಂದಿದ್ದಾರೆ.