ಕರ್ಮಯೋಗಿ ಮುದ್ರಾಡಿ ಮೋಹನ್‌ ಸ್ವಾಮೀಜಿ ಇನ್ನು ನೆನಪು ಮಾತ್ರ…….

ಮಗನೇ ನನಗೊಂದು ಗುಡಿ ಕಟ್ಟಿ ಪೂಜಿಸು” ಎಂದು ತಾಯಿ ಆದಿಶಕ್ತಿ ಅಪ್ಪಣೆಯಿತ್ತ ಕಾರಣ ಅಂದು ತಾಯಿಯನ್ನು ದಟ್ಟಾರಣ್ಯದ ನಡುವೆ ಗುಡಿ ಕಟ್ಟಿ ಪೂಜಿಸಿದೆ. ಹೇಗೋ ಇಂದಿನ ತನಕ ನಡೆದುಕೊಂಡು ಬಂದಿದೆ. ಈಗ ದೇವಪ್ರಶ್ನೆಯಿಂದ ಜೀರ್ಣೋದ್ಧಾರ ಮಾಡಬೇಕೆಂದು ತೋರಿಬಂದ ಕಾರಣ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದೇವೆ. ‌ನೀವೆಲ್ಲರೂ ಕೈ ಹಿಡಿದು ಮುನ್ನಡೆಸಿ, ತಾಯಿ ಆದಿಶಕ್ತಿ ನಿಮ್ಮನ್ನು ಎಂದೂ ಕೈ ಬಿಡುವುದಿಲ್ಲ ಜೀರ್ಣೋದ್ಧಾರದ ಪುಣ್ಯದ ಕಾರ್ಯದಲ್ಲಿ ನಿರತರಾಗಿ ಹಗಳಿರುಳು ಶ್ರಮಿಸುತ್ತಿದ್ದ ಅಪಾರ ದೈವ ಭಕ್ತ, ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಕರ್ಯಯೋಗಿ ಎಂದೇ ಅವರ ಭಕ್ತ ಸಮೂಹದಲ್ಲಿ ಗುರುತಿಸಿಕೊಂಡಿದ್ದ ಮುದ್ರಾಡಿ ಶ್ರೀದೇವಿ ನಿಲಯದ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಬುಧವಾರ ರಾತ್ರಿ ತಾಯಿ ಆದಿಶಕ್ತಿಯ ಪದತಲ ಸೇರಿದರು. 

ಒಂದು ಕಾಲದಲ್ಲಿ ಹುಲಿ ಚಿರತೆಗಳ ಆವಾಸ ಸ್ಥಾನವಾಗಿದ್ದ ಮುದ್ರಾಡಿಯ ಸಮೀಪದ ಬಚ್ಚಪ್ಪು ರಸ್ತೆಯ ಪಕ್ಕದಲ್ಲಿ ಭಕ್ತಿಯ ವಿಶೇಷ ಪ್ರೇರಣೆಯಿಂದ ದೇವಿಯ ಒಂದು ಪೋಟೋ ಇಟ್ಟು ಅಪಾರ ಭಕ್ತಿಯಿಂದ ತಾಯಿ ಆದಿಶಕ್ತಿಯ ಸೇವೆ ಮಾಡುತ್ತ ಬಂದು ಮುದ್ರಾಡಿ ಶ್ರೀದೇವಿ ನಿಲಯದಲ್ಲಿ ತಾಯಿಯನ್ನು ಆರಾಧಿಸಿಕೊಂಡು ಇದೀಗ ನಾಡಿನಲ್ಲಿ ಅಪರೂಪ ಎಂಬಲ್ಲಿ ದೈವದೇವರುಗಳ ವಿಶೇಷ ಕ್ಷೇತ್ರವಾಗಿ  ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿಯನ್ನು ಸ್ಥಾಪಿಸಿ ಕ್ಷೇತ್ರವನ್ನು ನಾಡಿನಲ್ಲಿ ಎತ್ತರಕ್ಕೆ ಏರಿಸಿದ್ದಾರೆ. 

ಆದಿಶಕ್ತಿ ಸಹಿತ ಕಲಿಯುಗದ ಹಿಂದಿನ ಶಕ್ತಿಕೇಂದ್ರವನ್ನು ಭಗಿರಥ ಪ್ರಯತ್ನದಿಂದ ಪುನರ್‌ನಿರ್ಮಿಸಿದ ಶ್ರೀ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಅವರ ಸಾಧನಾ ಕ್ಷೇತ್ರ, ಸರ್ವಧರ್ಮದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುವ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನವು ನಿಸರ್ಗ ರಮಣೀಯ ಪ್ರದೇಶದಲ್ಲಿ ಸಂಪೂರ್ಣವಾಗಿ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಕೆಲಸಗಳು ಭರದಿಂದ ನಡೆಯುತ್ತಿದ್ದು ಬಹುತೇಕ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದು ಇದೇ ಆಗಸ್ಟ್‌ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವವನ್ನು ನಡೆಸಲು ದಿನವನ್ನೂ ಕೂಡ ನಿಗದಿ ಮಾಡಲಾಗಿದೆ. ತಾಯಿಗೆ ಗುಡಿ ಕಟ್ಟಿ ಪೂಜಿಸುತ್ತ ಭವ್ಯ ದೇಗುಲ ನಿರ್ಮಾಣದ ಕನಸು ಹೊತ್ತು ಕನಸು ನನಸಾಗುವ ಆಗುವ ಕೊನೆಯ ಗಳಿಗೆಯಲ್ಲೇ ವೈಭವವನ್ನು ನೋಡುವ ಭಾಗ್ಯ ಅವರಿಗಿಲ್ಲ. ಅವರಿನ್ನು ನೆನಪು ಮಾತ್ರ. 

ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಶಿಲಾಮಯ ಗರ್ಭಗುಡಿ,ನಮಸ್ಕಾರ ಮಂಟಪ, ಸುತ್ತು ಪೌಳಿ, ಹೊರಾಂಗಣ, ದ್ವಾರದಲ್ಲಿ ಸಿಂಹ ಕಂಬಗಳು, ತಾಮ್ರದ ಮುಚ್ಚಿಗೆ, ಒಳಾಂಗಣಕ್ಕೆ ಗ್ರಾನೈಟ್‌, ದೇವಸ್ಥಾನದ ಸುತ್ತ ಆಕರ್ಷಕ ಶಿಲಾ ಕೆತ್ತನೆಗಳ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಪರಿವಾರ ದೈವಗಳ ಗುಡಿಗಳು ಕೂಡ ನಿರ್ಮಾಣ ಅಂತಿಮ ಹಂತದಲ್ಲಿವೆ.  ವಿವಿಧ ಆಕರ್ಷಕ ಕೆತ್ತನೆಗಳು ದೇವಸ್ಥಾನದ ಕಳೆಯನ್ನು ಹೆಚ್ಚಿಸಿವೆ. ಸುಂದರ ಶಿಲಾ ಕೆತ್ತನೆಗಳು ಇನ್ನಷ್ಟು ಮೆರುಗು ನೀಡಿವೆ. ಅಷ್ಟಮಂಗಲ ದೇವ ಪ್ರಶ್ನೆಯಿಂದ ತಿಳಿದು ಬಂದ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ ಎಂದು ಧರ್ಮಯೋಗಿ ಮೋಹನ್‌ಸ್ವಾಮೀಜಿ ಪ್ರತಿಸಲವೂ ಹೇಳುತ್ತಿದ್ದ ಆ ಧ್ವನಿ ಈಗ ಕಿವಿಯಲ್ಲಿ ಗುನುಗುವಂತಿದೆ. ಅಪಾರ ದೈವ ಭಕ್ತರಾದ ನೇರ ನಡೆ ನುಡಿಯ ಕರ್ಮಯೋಗಿ ಶ್ರೀ ದೇವಿ ನಿಲಯ ಮೋಹನ್‌ ಪಾತ್ರಿಯವರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಮುಂಬಯಿ,ಪೂನಾ, ಸಾಂಗ್ಲಿ, ಗುಜರಾತ್‌, ಬೆಂಗಳೂರು, ದುಬೈ, ಮಸ್ಕತ್‌ ಹೈದರಬಾದ್‌ ಸಹಿತ ದೇಶವಿದೇಶಗಳಲ್ಲೂ ಮುದ್ರಾಡಿ ಶ್ರೀಆದಿಶಕ್ತಿ ತಾಯಿ ಮತ್ತು ಮೋಹನ್‌ ಸ್ವಾಮೀಜಿಯ ಭಕ್ತರಿದ್ದಾರೆ. ಹಿಂದೂ ಮುಸ್ಲಿಂ, ಜೈನ, ಕ್ರೈಸ್ತ ಧರ್ಮಗಳ ಭಕ್ತರು ಕೂಡ ಆದಿಶಕ್ತಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ.

ಬ್ರಹ್ಮ ಬೈದರ್ಕಳ ಗರಡಿ, ಗುರು ಸಾರ್ವಭೌಮರಾದ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ, ನಂದಿಕೇಶ್ವರ ದೇವಸ್ಥಾನವೂ ಈಗಾಗಲೇ ನಿರ್ಮಾಣಗೊಂಡಿದೆ. ಪರಿವಾರ ದೈವಗಳ ನೆಲೆಯೂ ಇಲ್ಲಿದೆ. ನಾಡಿನ ಅಪರೂಪದ ಏಕೈಕ ಆರಾಧನ ಕ್ಷೇತ್ರವಾಗಿ ಮುದ್ರಾಡಿ ಆದಿಶಕ್ತಿ ಸನ್ನಿಧಿ ಖ್ಯಾತಿ ಪಡೆಯುವಲ್ಲಿ ಮೋಹನ್‌ ಸ್ವಾಮೀಜಿಯವರ ಅಪಾರ ಶ್ರಮವಿದೆ. ಮುದ್ರಾಡಿ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಧರ್ಮಯೋಗಿ ಮೋಹನ್‌ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನ ಡಾ.ಆರೂರು ಪ್ರಸಾದ್‌ರಾವ್‌ ಗೌರವ ಅಧ್ಯಕ್ಷತೆಯ ಮಾರ್ಗದರ್ಶನದಲ್ಲಿ ಮೋಹನ್‌ ಸ್ವಾಮೀಜಿ ಅವರ ಹಿರಿಯ ಪುತ್ರ ಆದಿಶಕ್ತಿ ಕ್ಷೇತ್ರದ ಸುಕುಮಾರ್‌ ಮೋಹನ್‌ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ. 

ಕುಟುಂಬವನ್ನೇ ಕಲಾ ಸೇವೆಗೆ ಸಮರ್ಪಣೆ : ಮೋಹನ್‌ ಸ್ವಾಮೀಜಿ ತಾನು ಮತ್ತು ತನ್ನ ಕುಟುಂಬವನ್ನು ಕಲಾರಾಧನೆಗೆ ಸಮರ್ಪಿಸಿದ್ದಾರೆ. ಹಲವರು ನಮಗೆ ಹುಚ್ಚು ಎಂದು ಹೇಳುತ್ತಿದ್ದಾರೆ. ಅವರು ಹೇಳುವುದು ಸತ್ಯ ನಮಗೆ ನಿಜವಾಗಿ ಹುಚ್ಚು. ಅದು ಕಲೆಯ ಹುಚ್ಚು ಎಂದು ಧರ್ಮಯೋಗಿ ಮೋಹನ್‌ ಯಾವಾಗಲೂ ಹೇಳುತ್ತಿದ್ದರು. ಧರ್ಮ ಮತ್ತು ಕಲೆಗೆ ಅಪಾರ ಕೊಡುಗೆಯನ್ನು ಮೋಹನ್‌ ಸ್ವಾಮೀಜಿ ನೀಡಿದ್ದಾರೆ. 40 ವರ್ಷಗಳ ಹಿಂದೇಯೆ ಶ್ರೀದೇವಿ ನಿಲಯದಲ್ಲಿ ನಮ ತುಳುವೆರ್‌ ಕಲಾ ಸಂಘಟನೆ, ಆಧಿಶಕ್ತಿ ಭಜನ ಸಂಘ, ಯಕ್ಷಗಾನ ಸಂಘ ಸಹಿತ ಕಲೆಗೆ ಸಂಬಂಧಿಸಿದ ಹಲವು ಸಂಘಟನೆಯನ್ನು ಸ್ಥಾಪಿಸಿ ತನ್ನ ಮಕ್ಕಳ ಮೂಲಕ ನಾಡಿಗೆ ನೀಡಿದ್ದಾರೆ. ಈಗ ಹಿರಿಯ ಪುತ್ರ ಸುಕುಮಾರ್‌ ಮೋಹನ್‌ ನೇತ್ರತ್ವದಲ್ಲಿ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ವಿಶ್ವದೆತ್ತರಕ್ಕೆ ಏರಿದೆ. ಯಕ್ಷಗಾನ ನಾಟಕ ತಾಳಮದ್ದಳೆ ಪಾತ್ರ ಮಾಡುತ್ತಿದ್ದ ಮೋಹನ್‌ ಪಾತ್ರಿ ಶ್ರೀದೇವಿ ಮಹಾತ್ಮೆ ಯಕ್ಷಗಾನದಲ್ಲಿ ಪಾತ್ರ ಮಾಡಿ ಜೀವ ತುಂಬುತ್ತಿದ್ದರು. ನವರಾತ್ರಿಯ ನವರಂಗೋತ್ಸವ, ಸರ್ವಧರ್ಮ ಸಮ್ಮೇಳನ, ತುಳು ಸಮ್ಮೇಳನ, ನಿತ್ಯ ಅನ್ನ ದಾಸೋಸ, ನೆರವು ಅರಸಿ ಬಂದವರಿಗೆ ಕೈಯಲ್ಲಾದ ಸಹಾಯ ನೀಡಿ ತೆರೆಮರೆಯಲ್ಲೇ ಕೆಲಸ ಮಾಡುತ್ತ ಖ್ಯಾತಿ ಗಳಿಸಿದ್ದಾರೆ. ಕ್ಷೇತ್ರ ಮತ್ತು ಕಲೆಯನ್ನು ಮನಗಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಮೋಹನ್‌ ಸ್ವಾಮೀಜಿ ಅತ್ಯಂತ ಸಂತಸಗೊಂಡು ಸಾರ್ಥಕ ಭಾವನೆ ಹೊಂದಿದ್ದರು. ನಾಡಿನ ಬಹುತೇಕ ಮಂದಿ ಮುದ್ರಾಡಿ ಕ್ಷೇತ್ರಕ್ಕೆ ಬಂದಿದ್ದಾರೆ. ರಾಜಕಾರಣಿಗಳು, ಕಲಾ ಆರಾಧಕರು, ಅಧಿಕಾರಿಗಳು, ರಂಗ ಕರ್ಮಿಗಳು ಸಾಹಿತಿಗಳು, ಸ್ವಾಮೀಜಿಗಳು ಆದಿಶಕ್ತಿ ಕ್ಷೇತ್ರಕ್ಕೆ ಆಗಮಿಸಿ ಕಲಾ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಲೆಯ ಸಾಧನೆಯಿಂದಾಗಿ ಮುದ್ರಾಡಿ ಶ್ರೀದೇವಿ ಪರಿಸರ ಈಗ ನಾಟ್ಕದೂರು ಆಗಿದೆ. ಕ್ಷೇತ್ರದ ಮಹಿಮೆ ಶಾಶ್ವತವಾಗಿ ಕಲೆಯ ಮೂಲಕ ವಿಜೃಂಭಿಸಬೇಕು ಎನ್ನುವ ಮಹದಾಸೆಯಿಂದ ” ಮುದ್ರಾಡಿ ಶ್ರೀ ಆದಿಶಕ್ತಿ ಮಹಾತ್ಮೆ” ಯಕ್ಷಗಾನವಾಗಿದೆ.

ಅತ್ಯಂತ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಶ್ರೀದೇವಿಯ ಆರಾಧನೆಯ ಮೂಲಕ ಕಷ್ಟನಷ್ಟ ಸುಖದು:ಖಗಳ ನೋವುಂಡು ಎತ್ತರಕ್ಕೆ ಏರಿದ ಅವರ ಸಾಧನೆ ಅದ್ಭುತ. ಮೋಹನ್‌ ಪಾತ್ರಿ ಧರ್ಮಪತ್ನಿಕಮಲಾ ಮೋಹನ್‌ ಅಪಾರವಾಗಿ ಪತಿಯ ಸೇವೆಯನ್ನು ಮಾಡಿದ್ದಾರೆ. ವಿಶೇಷ ಧೈವ ಭಕ್ತೆಯಾಗಿ ಮೋಹನ್‌ ಸ್ವಾಮೀಜಿಯ ಹಿಂದೆ ನಿಂತು ಎಲ್ಲವನ್ನು ಮುನ್ನಡೆಸಿದ್ದಾರೆ. ಹಿರಿಯ ಪುತ್ರ ಸುಕುಮಾರ್‌ ಮೋಹನ್‌ ನಾಡಿನ ಖ್ಯಾತ ರಂಗ ನಟ ನಿರ್ದೇಶಕರಾಗಿ ಕಲೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿ ವಿವಿಧ ಸಂಘಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಏಕಮಾತ್ರ ಪುತ್ರಿ ಸುಗಂಧಿ ಉಮೇಶ್‌ ಕಲ್ಮಾಡಿ ರಂಗದ ಅದ್ಭುತ ನಟಿಯಾಗಿದ್ದಾರೆ. ಪುತ್ರರಾದ ಸುಧೀಂದ್ರ ಮೋಹನ್‌, ಸುರೇಂದ್ರ ಮೋಹನ್‌, ಅಳಿಯ ಉಮೇಶ್‌ ಕಲ್ಮಾಡಿ, ಸೊಸೆಯಂದಿರು, ಮೊಮ್ಮಕ್ಕಳು ಕೂಡ ಬಣ್ಣಹಚ್ಚಿ ಕಲಾ ಸೇವೆ ಮಾಡಿದ್ದನ್ನು ಮೋಹನ್‌ ಸ್ವಾಮೀಜಿ ಕಣ್ತುಂಬಿಕೊಂಡು ಧನ್ಯರಾಗಿದ್ದರು. ತನ್ನ ಇಡಿ ಕುಟುಂಬವನ್ನೇ ಕಲೆಯ ಸೇವೆಗೆ ಸಮರ್ಪಿಸಿದ್ದಾರೆ. ನನ್ನದೇನಿಲ್ಲ. ಎಲ್ಲವೂ ಆ ತಾಯಿ. ಕ್ಷೇತ್ರಕ್ಕೆ ಮಹಿಮರಾದ ನೀವೆಲ್ಲ ಬರುತ್ತೀರಿ ಎಂದರೆ ಅದೂ ತಾಯಿಯ ಮಹಿಮೆ. ನಾವು ನೀಡುವ ಆದರ ಆತೀಥ್ಯ ಗೌರವವೂ ತಾಯಿಯ ಪ್ರಸಾದ. ಎಲ್ಲವನ್ನೂ ಆ ತಾಯಿ ನಡೆಸಿಕೊಂಡು ಹೋಗುತ್ತಾಳೆ, ನಾನೂ ಹಾಗೇಯೇ ನಡೆಯುತ್ತೇನೆ ಎಂದು ನುಡಿಯುತ್ತಿದ್ದರು. ಇನ್ನೂ ಮುಂದೆಯು ಎಲ್ಲರನ್ನೂ ಆ ತಾಯಿ ಮುನ್ನಡೆಸಲಿ… ಪೂಜ್ಯರಾದ ಮೋಹನ್‌ ಸ್ವಾಮೀಜಿ ಕಂಡ ಕನಸುಗಳು ನನಸಾಗಲಿ….. “ಎಲ್ಲರೂ ಕೈ ಹಿಡಿದು ಮುನ್ನಡೆಸಿ ತಾಯಿಯ ಕೃಫೆಗೆ ಪಾತ್ರರಾಗಲಿ……. ಅವರ ಪವಿತ್ರ ಆತ್ಮಕ್ಕೆ ತಾಯಿ ಚಿರಶಾಂತಿ ನೀಡಲಿ. “ಅಯ್ಯ” ನಿಲ್ಲದ ದೇವಿ ನಿಲಯದ ಕುಟುಂಬಕ್ಕೆ ಎಲ್ಲವನ್ನೂ ಸಹಿಸುವ ಶಕ್ತಿ ದೊರೆಯಲಿ……..
✍️  ಸುಕುಮಾರ್‌ ಮುನಿಯಾಲ್‌

Leave a Reply

Your email address will not be published. Required fields are marked *

error: Content is protected !!