ಕಿನ್ನಿಗೋಳಿ ಐಸಿವೈಎಂ ಅಧ್ಯಕ್ಷ, ಯುವ ಛಾಯಾಗ್ರಾಹಕ ಆತ್ಮಹತ್ಯೆ
ಮುಲ್ಕಿ ಜು.22: ಯುವ ಫೋಟೋಗ್ರಾಫರ್ ಒಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕಾಪಿಕಾಡ್ ಬಳಿ ನಡೆದಿದೆ.
ರಾಹುಲ್ ಕಾಲಿನ್ ಫೆರ್ನಾಂಡಿಸ್(26) ಆತ್ಮಹತ್ಯೆ ಮಾಡಿಕೊಂಡವರು. ತಂದೆ ಅಸೌಖ್ಯದಿಂದ ಇರುವ ಕಾರಣ ಮಗ ರಾಹುಲ್ ತನ್ನ ತಂದೆ ಜೊತೆ ಮಲಗುತ್ತಿ. ತಡರಾತ್ರಿ ಎರಡು ಗಂಟೆ ಸುಮಾರಿಗೆ ತಾಯಿ ಪರಿಶೀಲಿಸಿದಾಗ ಮಗ ನಾಪತ್ತೆಯಾಗಿರುವುದನ್ನು ಕಂಡು ಬಂದಿದೆ. ಈ ವೇಳೆ ಗಾಬರಿಯಾಗಿ ಹುಡುಕಾಟ ನಡೆಸಿದಾಗ ಮನೆ ಹಿಂಬದಿಯಲ್ಲಿರುವ ಬಾವಿಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಯುವಕ ರಾಹುಲ್ ಕಳೆದ ದಿನದ ಹಿಂದೆ ನನಗೆ ನಾಲ್ಕು ಲಕ್ಷ ರೂ ನ ಬೈಕ್ ಬೇಕು ಎಂದು ತಂದೆ ಜೊತೆ ಹಠಹಿಡಿದಿದ್ದ ಹಾಗೂ ಆತ್ಮಹತ್ಯೆ ಮಾಡುವುದಕ್ಕೆ ಮುನ್ನ ತನ್ನ ಫೇಸ್ಬುಕ್ ಹಾಗೂ ವಾಟ್ಸಪ್ ಡಿಲೀಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕ ಕಿನ್ನಿಗೋಳಿಯಲ್ಲಿ ಆರ್. ಸಿ. ಎಫ್ ಹೆಸರಿನ ಫೋಟೋ ಸ್ಟುಡಿಯೋ ನಡೆಸುತ್ತಿದ್ದರು. ಅಲ್ಲದೆ ಕಿನ್ನಿಗೋಳಿ ಚರ್ಚ್ ನ ಐಸಿವೈಎಂ ಘಟಕದ ಅಧ್ಯಕ್ಷನಾಗಿದ್ದು, ಉತ್ತಮ ಕ್ರೀಡಾಪಟು ಹಾಗೂ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.