ಬಾವಿಗೆ ಬಿದ್ದು ನಿವೃತ್ತ ಶಿಕ್ಷಕಿ ಮೃತ್ಯು

ಶಿವಮೊಗ್ಗ ಜು.2: ಆಕಸ್ಮಿಕವಾಗಿ ಕಾಲು ಜಾರಿ ತೆರೆದ ಬಾವಿಗೆ ಬಿದ್ದು ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ ವೆಂಕಟೇಶ್ವರ ನಗರದಲ್ಲಿ ನಡೆದಿದೆ.

ನೀಲಮ್ಮ (73) ಮೃತಪಟ್ಟವರು. ಇವರು ಇಂದು ಮುಂಜಾನೆ  ಮನೆಯಲ್ಲಿ ಕಾಣಿಸದಿದ್ದಾಗ ಮನೆಯವರು ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ನೀಲಮ್ಮ ಎಲ್ಲೂ ಪತ್ತೆಯಾಗಿಲ್ಲ. ನಂತರ ಬಾವಿಯ ಬಳಿ  ನೀಲಮ್ಮ ಅವರ ಚಪ್ಪಲಿ ಇದ್ದಿದ್ದನ್ನು ಗಮನಿಸಿ ಅನುಮಾನಗೊಂಡು ಬಾವಿಯ ಒಳಗೆ ನೋಡಿದ್ದಾರೆ. ಈ ವೇಳೆ ಬಾವಿಯಲ್ಲಿ ನೀಲಮ್ಮ ಮೃತದೇಹ ತೇಲುತ್ತಿದ್ದದ್ದು ಪತ್ತೆಯಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ತೆರೆದ ಬಾವಿಯಿಂದ ನೀರೆತ್ತುವ ಮೋಟಾರ್ ಪಂಪ್ ದುರಸ್ತಿ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ನಿನ್ನೆ ಮನೆಗೆ ಭೇಟಿ ನೀಡಿ ರಿಪೇರಿ ಮಾಡಿ ತೆರಳಿದ್ದರು. ಇಂದು ಮುಂಜಾನೆ ಬಾವಿಗೆ ಅಳವಡಿಸಿದ್ದ ಗ್ರಿಲ್ ತೆಗೆದು ಮೋಟಾರ್ ಸರಿ ಹೋಗಿದೆಯೋ ಅಥವಾ ಇಲ್ಲವೋ ಎಂದು ನೋಡಲು ಮುಂದಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಅವರು ಮೃತಪಟ್ಟಿರಬಹುದು ಎಂದು ಶಂಕಿಸ ಲಾಗಿದೆ.ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!