ರೇಖಾ ಕದಿರೇಶನ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಕಾಲಿಗೆ ಗುಂಡಿಕ್ಕಿದ ಪೊಲೀಸರು

ಬೆಂಗಳೂರು, ಜೂ.25: ನಗರದ ಛಲವಾದಿ ಪಾಳ್ಯದ ಬಿಬಿಎಂಪಿಯ ಮಾಜಿ ಸದಸ್ಯೆ ರೇಖಾ ಕದಿರೇಶನ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು ಕೃತ್ಯ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರ ಕಾರ್ಯಾಚರಣೆಯ ವೇಳೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಆರೋಪಿಗಳಿಬ್ಬರ ಕಾಲಿಗೆ ಗುಂಡಿಕ್ಕಿ ಬಳಿಕ ಬಂಧಿಸಲಾಯಿತು.

ಆರೋಪಿಗಳಿಬ್ಬರು, ಸುಮನಹಳ್ಳಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು. ಈ ವೇಳೆ ಆರೋಪಿಗಳು ಪಿಎಸ್ಸೈ ಮತ್ತು ಕಾನ್ ಸ್ಟೇಬಲ್ ಮೇಲೆ ಹಲ್ಲೆಗೆ ಮುಂದಾದರೆನ್ನಲಾಗಿದೆ. ಈ ವೇಳೆ ಪೊಲೀಸರು ಅವರಿಬ್ಬರ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಬಳಿಕ ಗಾಯಗೊಂಡ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿನ್ನೆ ಬೆಳಿಗ್ಗೆ, ನಗರದ ಛಲವಾದಿ ಪಾಳ್ಯದ ಬಿಬಿಎಂಪಿಯ ಮಾಜಿ ಸದಸ್ಯೆ ರೇಖಾ ಕದಿರೇಶನ್(40) ರನ್ನು ಇಲ್ಲಿನ ಛಲವಾದಿಪಾಳ್ಯದ ಫ್ಲವರ್ ಗಾರ್ಡನ್‌ನಲ್ಲಿ ತಮ್ಮ ಕಚೇರಿ ಮುಂದೆ ದುಷ್ಕರ್ಮಿಗಳ ತಂಡ ಕತ್ತು ಕೊಯ್ದು, ಹಲ್ಲೆ ನಡೆಸಿ ಕೊಲೆಗೈದಿತ್ತು. ಇವರ ಪತಿ ಕದಿರೇಶನ್ ಕೂಡಾ 2018ರ ಫೆಬ್ರವರಿ 7ರಂದು ಫ್ಲವರ್ ಗಾರ್ಡನ್ ದೇವಸ್ಥಾನದ ಆವರಣದಲ್ಲಿ ಹತ್ಯೆಗೀಡಾಗಿದ್ದರು. ರೇಖಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಿಂದ ಸುಮಾರು 50 ಮಂದಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!