ಕುಂಭಮೇಳದಲ್ಲಿ ಕೋವಿಡ್-19 ಟೆಸ್ಟಿಂಗ್ ಹಗರಣ ಶಂಕೆ ವ್ಯಕ್ತ?

ಹರಿದ್ವಾರ: ಲಕ್ಷಾಂತರ ಮಂದಿ ಸೇರಿದ್ದ ಹರಿದ್ವಾರ ಕುಂಭದಲ್ಲಿ ಕೋವಿಡ್-19 ಟೆಸ್ಟಿಂಗ್ ಹಗರಣ ನಡೆದಿದೆಯೇ? ಇಂಥಹದ್ದೊಂದು ಅನುಮಾನ ಈಗ ಕಾಡಲಾರಂಭಿಸಿದೆ.  ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಈಗ ಬಹಿರಂಗವಾಗತೊಡಗಿದ್ದು ಹಗರಣದ ಶಂಕೆ ವ್ಯಕ್ತವಾಗತೊಡಗಿದೆ.

ಪ್ರಸಕ್ತ ಸಾಲಿನ ಮಹಾಕುಂಭಮೇಳ ಅವಧಿಯಾದ ಏಪ್ರಿಲ್ ನಲ್ಲಿ ಸೋಂಕು ಪತ್ತೆ ಪರೀಕ್ಷೆ ಹಾಗೂ ಪಾಸಿಟಿವಿಟ್ ರೇಟ್ ನ ಡಾಟಾ ವಿಶ್ಲೇಷಣೆಯನ್ನು ನಡೆಸಲಾಗಿದ್ದು,ರಾಜ್ಯದ ಇತರ ಭಾಗಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹರಿದ್ವಾರದಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ಇತರ ಭಾಗಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಹರಿದ್ವಾರದಲ್ಲಿ ಸೋಂಕು ಪತ್ತೆಯಾಗಿದೆ.

ಏ.1-30 ವರೆಗೆ ಹರಿದ್ವಾರದಲ್ಲಿ 6,00,291 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, 17,375 ಪ್ರಕರಣಗಳಲ್ಲಿ ಮಾತ್ರವೇ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ರಾಜ್ಯದ 12 ಇತರ ಜಿಲ್ಲೆಗಳಲ್ಲಿ 4,42,432 ಪರೀಕ್ಷೆಗಳನ್ನು ನಡೆಸಲಾಗಿದ್ದು, 62,735 ಪ್ರಕರಣ ಗಳಲ್ಲಿ ಸೋಂಕು ದೃಢಪಟ್ಟಿದೆ. ಏಪ್ರಿಲ್ ನಲ್ಲಿ ಹರಿದ್ವಾರದಲ್ಲಿ ಶೇ.60 ರಷ್ಟು ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಆದರೆ ರಾಜ್ಯದ ಬೇರೆ ಭಾಗಗಳಿಗೆ ಹೋಲಿಕೆ ಮಾಡಿದಲ್ಲಿ, ಕೆಲವೇ ಪ್ರಕರಣಗಳು ಮಾತ್ರ ದೃಢಪಟ್ಟಿವೆ.

ಏಪ್ರಿಲ್ ತಿಂಗಳಲ್ಲಿ ಉತ್ತರಾಖಂಡ್ ನ ಸರಾಸರಿ ದೃಢಪಟ್ಟ ಸಂಕುಗಳ ಪ್ರಮಾಣ ಶೇ.14.18 ರಷ್ಟಿತ್ತು. ಹರಿದ್ವಾರದ್ದು ಈ ಪೈಕಿ ಶೇ. 2.89 ರಷ್ಟು ಮಾತ್ರವೇ ಇದೆ. ಅಂದರೆ ಕುಂಭಮೇಳ ನಡೆದಾಗ ಲಕ್ಷಾಂತರ ಮಂದಿ ಭಾಗವಹಿಸಿದ್ದಾಗಲೂ ಸಹ ರಾಜ್ಯದ ಇತರ ಭಾಗಗಳಿಗಿಂತಲೂ ಶೇ.80 ರಷ್ಟು ಕಡಿಮೆ ಇತ್ತು. ಈ ವಿಶ್ಲೇಷಣೆಯ ಪ್ರಕಾರ ಒಂದೋ ರಾಜ್ಯದಲ್ಲಿ ನಕಲಿ ಪರೀಕ್ಷೆಗಳು ನಡೆದಿವೆ. ಅಥವಾ ಉದ್ದೇಶಪೂರ್ವಕವಾಗಿ ಸಂಖ್ಯೆಗಳನ್ನು ಮರೆಮಾಚಲಾಗಿದೆ ಎಂಬ ಅನುಮಾನ ವ್ಯಕ್ತವಾಗತೊಡಗಿದೆ.

ಆದರೆ ಅಧಿಕಾರಿಗಳಿಗೆ ಮಾತ್ರ ತಪ್ಪು ನಡೆಯುತ್ತಿದ್ದರ ಬಗ್ಗೆ ಅನುಮಾನ ಬಂದಿರಲಿಲ್ಲ. ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ಕಡಿಮೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದಕ್ಕೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಗಳನ್ನು ಕಾರಣವಾಗಿ ನೀಡಿದ್ದಾರೆ. “ಪ್ರತಿ ದಿನವೂ ಸಾವಿರಾರು ಮಂದಿ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದರು, ಇಂತಹ ಪರಿಸ್ಥಿತಿಯಲ್ಲಿ ಆರ್ ಟಿ-ಪಿಸಿಆರ್ ಟೆಸ್ಟ್ ಗಳನ್ನು ಪ್ರತಿಯೊಬ್ಬರಿಗೂ ಮಾಡಿಸುವುದು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಕುಂಭಮೇಳದಲ್ಲಿ ಪರೀಕ್ಷೆಗಳನ್ನು ನಡೆಸಿದ ಪ್ರಯೋಗಾಲಯಗಳನ್ನು ಮೇಳ ಆಡಳಿತದಿಂದ ನೇಮಕಗೊಳಿಸಲಾಗಿತ್ತು ಎಂದು ಡಿ.ಎಂ ಸಿ ರವಿಶಂಕರ್ ಹೇಳಿದ್ದಾರೆ. ಫರೀದ್ಕೋಟ್ ನ ನಿವಾಸಿಯೊಬ್ಬರು ತಾವು ಪರೀಕ್ಷೆ ಮಾಡಿಸದೇ ಇದ್ದರೂ ಸಹ ಕೋವಿಡ್-19 ಸೋಂಕು ಪತ್ತೆ ವರದಿಯನ್ನು ತೆಗೆದುಕೊಳ್ಳುವಂತೆ ತಮಗೆ ಮೆಸೇಜ್ ಬಂದಿದ್ದರಿಂದ ಹರಿದ್ವಾರದಲ್ಲಿ ಕೊರೋನಾ ಸೋಂಕು ಪತ್ತೆ ಪ್ರಕ್ರಿಯೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ. 

ಫರೀದ್ ಕೋಟ್ ನ ನಿವಾಸಿ ನೀಡಿದ ದೂರನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ  ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸಸ್ ನಿಂದ ನಡೆಸಿದ 1,00,000 ನಕಲಿ ಪರೀಕ್ಷೆಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಉತ್ತರಾಖಂಡ್ ಪೊಲೀಸರು ಎಸ್ ಐಟಿಯನ್ನು ರಚಿಸಿದ್ದು, ಈ ಖಾಸಗಿ ಏಜೆನ್ಸಿಗೆ ಕುಂಭಮೇಳದಲ್ಲಿ ಟೆಸ್ಟಿಂಗ್ ನಡೆಸುವುದಕ್ಕೆ ಗುತ್ತಿಗೆ ಹೇಗೆ ದೊರೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!