ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ಹತ್ಯೆಗೈದ ತಂದೆ

ಪಿರಿಯಾಪಟ್ಟಣ: ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದನ್ನು ವಿರೋಧಿಸಿ ರೊಚ್ಚಿಗೆದ್ದ ತಂದೆ ಗುರುವಾರ ಮಗಳ ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದಾನೆ. 

ಪಟ್ಟಣದ ಗೊಲ್ಲರಬೀದಿಯ ನಿವಾಸಿ ಜಯರಾಂ ಮಗಳನ್ನು ಹತ್ಯೆ ಮಾಡಿದ ಆರೋಪಿ. ಗಾಯಿತ್ರಿ(19) ಅಪ್ಪನಿಂದ ಕೊಲೆಯಾದ ಯುವತಿ. ಮಗಳು ಗಾಯಿತ್ರಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದು ಅವನನ್ನೇ ಮದುವೆಯಾಗುವುದಾಗಿ ಹಠಹಿಡಿದಿದ್ದಳು. ಈ ವಿಷಯವಾಗಿ ಒಂದು ತಿಂಗಳಿನಿಂದ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು.

ಗುರುವಾರ ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ತಂದೆಗೆ ಊಟ ತೆಗೆದುಕೊಂಡು ಬಂದಿದ್ದ ಗಾಯಿತ್ರಿಯೊಂದಿಗೆ ಅಪ್ಪ ಜಯರಾಂ ಮಗಳಿಗೆ ಬುದ್ದಿಮಾತು ಹೇಳಿದ್ದು, ಪ್ರೀತಿಸುತ್ತಿರುವ ಯುವಕನನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದ್ದಾನೆ. ನಾನು ಬಿಡುವುದಿಲ್ಲ ಏನು ಮಾಡುತ್ತೀಯ ಎಂದು ಗಾಯಿತ್ರಿ ಅಪ್ಪನನ್ನು ಪ್ರಶ್ನಿಸಿದ್ದರಿಂದ ರೊಚ್ಚಿಗೆದ್ದ ಅಪ್ಪ ಜಯರಾಂ ಜೊತೆಯಲ್ಲಿ ಕೃಷಿ ಕೆಲಸಕ್ಕೆಂದು ಇಟ್ಟು ಕೊಂಡಿದ್ದ ಮಚ್ಚಿನಿಂದ ಮಗಳ ಮಚ್ಚು ಬೀಸಿದ್ದಾನೆ.

ತಡೆಯಲು ಕೈ ಅಡ್ಡ ಇಟ್ಟು ಕೊಂಡಿದ್ದರಿಂದ ಕೈಗೆ ಏಟು ಬಿದ್ದಿದ್ದು, ಮತ್ತೊಮ್ಮೆ ಮಚ್ಚಿನಿಂದ ಕುತ್ತಿಗೆಯ ಹಲ್ಲೆ ನಡೆಸಿ ಹತ್ಯೆ ಗೈದಿದ್ದಾನೆ. ಬಳಿಕ ಆರೋಪಿಯು ಪಟ್ಟಣದ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೃತ್ಯ ನಡೆದ ಸ್ಥಳಕ್ಕೆ ಡಿವೈಎಸ್ ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಜಗದೀಶ್, ಬಿ.ಆರ್.ಪ್ರದೀಪ್, ಪಿಎಸ್ಐ ಸದಾಶಿವತಿಪರೆಡ್ಡಿ, ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಜಯರಾಂ ವಿರುದ್ದ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!