ಕಷ್ಟದ ಸಮಯದಲ್ಲಿ ನೆರವಾಗುವುದನ್ನು ತಡೆಯುತ್ತೀರಲ್ಲ- ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ: ಡಿಕೆಶಿ

ಬೆಂಗಳೂರು, ಜೂ.14: ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಬಿಜೆಪಿ ನಾಯಕರು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು  ಶ್ರಮಪಟ್ಟು ದುಡಿದ ತಮ್ಮ ಹಣದಲ್ಲಿ ಬಡವರಿಗೆ ಆಹಾರ ಕಿಟ್, ಧನಸಹಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಮಹದೇವಪುರ ಹಾಗೂ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ವರ್ತೂರು, ವೈಟ್ ಫೀಲ್ಡ್, ಮುನೇನಕೊಳಲು, ಕಲ್ಕೆರೆಯಲ್ಲಿ ನಿನ್ನೆ ಬಡವರಿಗೆ ಆಹಾರ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು, ಈ ಆಹಾರ ಕಿಟ್ ನಿಂದ ನಿಮ್ಮ ಸಮಸ್ಯೆಗಳೆಲ್ಲ ಬಗೆಹರಿಯದಿದ್ದರೂ, ಸಂಕಷ್ಟದ ಸಮಯದಲ್ಲಿ ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬಲು  ಇಲ್ಲಿಗೆ ಬಂದಿದ್ದೇವೆ. ಇವರಿಗೆ ಯಾವ ಅಧಿಕಾರವೂ ಇಲ್ಲ, ಸರ್ಕಾರದ ದುಡ್ಡೂ ಅಲ್ಲ. ತಾವು ದುಡಿದ ಸ್ವಂತ ದುಡ್ಡಿನಲ್ಲಿ ಸಹಾಯ ಮಾಡುತ್ತಿ ದ್ದಾರೆ. ಬಡವರಿಗೆ ನೆರವಾಗಿ ಎಂದು ಪಕ್ಷ ಸೂಚನೆ ನೀಡಿತ್ತು. ಅದಕ್ಕೆ ಸ್ಪಂದಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿ ದ್ದಾರೆ ಎಂದು ಹೇಳಿದರು.

ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ, ಮನೆ ಕೆಲಸ ಮಾಡುವವರಿಗೆ 10 ಸಾವಿರ ರೂ. ಪರಿಹಾರ ಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಹಲವಾರು ಬಾರಿ ಕೇಳಿದೆವು. ಅವರು ಕೆಲವರಿಗೆ 5 ಸಾವಿರ ರೂ., ಕೆಲವರಿಗೆ 3 ಸಾವಿರ, ಮತ್ತೆ ಕೆಲವರಿಗೆ 2 ಸಾವಿರ ರೂ. ಘೋಷಿಸಿದರು. ಆದರೆ ಇದುವರೆಗೂ ಆ ಹಣ ಯಾರಿಗೂ ತಲುಪಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಹೃದಯ ಶ್ರೀಮಂತಿಕೆಯ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನೀವು ಪ್ರೋತ್ಸಾಹ ನೀಡಬೇಕು ಎಂದ ಅವರು, ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್ ಗಳನ್ನು ಕಿತ್ತು ಹಾಕಿಸಿದ್ದಾರೆ. ಪಾಪ ಆ ಪೊಲೀಸ್ ಅವರಿಗೆ ನಮ್ಮ ಸಹವಾಸ ಗೊತ್ತಿಲ್ಲ.ಅವರನ್ನು ಕರೆಸಿ ಸನ್ಮಾನ ಮಾಡಬೇಕು ಎಂದು ಟೀಕಿಸಿದರು.

ನೆರವು ವಿತರಣೆ ಕಾರ್ಯಕ್ರಮ ನಿಲ್ಲಿಸಿದರೆ ಜನರನ್ನು ಕರೆದುಕೊಂಡು ಬಂದು ನಿಮ್ಮ ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತೇನೆ ಎಂದ ಅವರು, ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಆದರೆ ನಿಮ್ಮ ಕೇಸ್ ಗಳಿಗೆ ಹೆದರುವ ಮಕ್ಕಳು ಕಾಂಗ್ರೆಸ್ ನವರಲ್ಲ. ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು.

ನಿಮ್ಮ ಕೈಯಲ್ಲಿ ಬಡವರಿಗೆ ನೆರವಾಗಲು ಸಾಧ್ಯವಾದರೆ ನೆರವಾಗಿ. ಅದನ್ನು ಬಿಟ್ಟು ಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗುವುದನ್ನು ತಡೆಯುತ್ತೀರಲ್ಲ ನೀವು ಮನುಷ್ಯರಾ ಅಥವಾ ದನಗಳಾ? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಕಿಟ್ ಗೆ ತಮ್ಮ ಫೋಟೋ ಹಾಕಿಕೊಂಡು ಬಿಜೆಪಿ ನಾಯಕರು ಹಂಚುವಾಗ ಈ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಮಲಗಿದ್ದರಾ? ಮಾನ ಮರ್ಯಾದೆ ಇದ್ದರೆ ಬಡವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನಿಮ್ಮ ಕಾನ್ಸ್ಟೇಬಲ್ ಗಳಿಗೆ ನೀವು ಸಹಾಯ ಮಾಡಿದ್ದೀರಾ? ಜನರಿಗೆ ನಮ್ಮ ನಾಯಕರು ಸಹಾಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಲಂಚ, ಸಂಬಳ ಇಲ್ಲ ಆದರೂ ತಮ್ಮ ಹಣದಲ್ಲಿ ನೀಡುತ್ತಿದ್ದಾರೆ ಎಂದು ಹೇಳಿದರು.

1 thought on “ಕಷ್ಟದ ಸಮಯದಲ್ಲಿ ನೆರವಾಗುವುದನ್ನು ತಡೆಯುತ್ತೀರಲ್ಲ- ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ: ಡಿಕೆಶಿ

  1. shrama pattu dudida tama hana..

    astound hanavanna shramapattu dudiodu namagu heli sir. naav dudithivi. yara kit noo avasyakathenoo iralla avaaga..

Leave a Reply

Your email address will not be published. Required fields are marked *

error: Content is protected !!