ಮದುವೆಗೆ 40 ಮಂದಿ, ಗಣಿಗಾರಿಕೆಗೆ, ಸಿಮೆಂಟ್ ಉದ್ಯಮದ ಸಣ್ಣ ಕೈಗಾರಿಕೆಗೆ ಅನುಮತಿ- ಪರಿಷ್ಕೃತ ಮಾರ್ಗ ಸೂಚಿ ಇಲ್ಲಿದೆ…
ಉಡುಪಿ ಮೇ.8(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಮಿತಿ ಮೀರಿ ಹರಡುತ್ತಿರುವ ಕೊರೋನಾ ಸೋಂಕನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದಾದ್ಯಂತ ಪರಿಷ್ಕೃತ ಮಾರ್ಗ ಸೂಚಿಯನ್ನು ಪ್ರಕಟಿಸಿದೆ. ಈ ನೂತನ ಮಾರ್ಗ ಸೂಚಿಯಲ್ಲಿ ಮೇ.10 ರ ಬೆಳಿಗ್ಗೆ 6 ಗಂಟೆ ಯಿಂದ ಮೇ.24 ರ ಬೆಳಿಗ್ಗೆ 6 ಗಂಟೆ ವರೆಗೆ ರಾಜ್ಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿ ಇರಲಿದೆ.
ಈ ನಿಷೇದಾಜ್ಞೆಯಲ್ಲಿ ಸೂಚಿಸಲಾದ ನೂತನ ಮಾರ್ಗ ಸೂಚಿಯಲ್ಲಿ ಕೆಲವೊಂದು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯ ಆಗುವಂತೆ ಈ ಸೇರ್ಪಡೆಗಳನ್ನು ಅಳವಡಿಸಿ ಸರಕಾರ ಆದೇಶ ನೀಡಿದೆ. ಅದರಂತೆ ರಾಜ್ಯದಲ್ಲಿ ಸ್ಟೀಲ್ ಉದ್ಯಮಕ್ಕೆ ಅಗತ್ಯವಿರುವ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಸಿಮೆಂಟ್ ಉದ್ಯಮಗಳಿಗೆ ಸಂಬಂದಿತ ಸಣ್ಣ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ
ಇದರೊಂದಿಗೆ,ಮದುವೆ ಕಾರ್ಯಕ್ರಮಗಳನ್ನು ಸರಕಾರದ ನಿಯಮಗಳನ್ನು ಅನುಸರಿಸಿಕೊಂಡು 40 ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ ಮದುವೆ ಕಾರ್ಯಕ್ರಮವನ್ನು ಆಯೋಜಿಸುವವರು ಮದುವೆ ಆಮಂತ್ರಣ ಪತ್ರ ದೊಂದಿಗೆ ಆಹ್ವಾನಿತರ ಸಹಿ ಇರುವ ಅರ್ಜಿ ಸಲ್ಲಿಸಿ ಜಿಲ್ಲಾಡಳಿತದಿಂದ ಅನುಮತಿ ಪಡೆಯ ತಕ್ಕದ್ದು. ಅಲ್ಲದೆ ಜಿಲ್ಲಾಡಳಿತ ನೀಡಿದ ಪಾಸ್ ಹೊಂದಿರುವವರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಹಾಗೂ ಮದುವೆ ಸಮಾರಂಭದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಬೇಕಾಗುತ್ತದೆ ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ.