ಮತ್ತೆ ಪೆಟ್ರೋಲ್ ಡೀಸಿಲ್ ಬೆಲೆ ಏರಿಕೆ- ಕರುಣೆಯಿಲ್ಲದ ಜನ ವಿರೋಧಿ ಬಿಜೆಪಿ ಸರಕಾರ: ಅಶೋಕ್ ಕೊಡವೂರು
ಉಡುಪಿ: ಕೊರೋನಾ ಮಹಾಮಾರಿಯಿಂದ ಜನ ಬದುಕಿನ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಈ ಸಂಕಷ್ಟದ ಸನ್ನಿವೇಶದಲ್ಲಿ ಸರಕಾರ ಪೆಟ್ರೋಲ್, ಡೀಸಿಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಇದೊಂದು ಕರುಣೆಯಿಲ್ಲದ ಜನ ವಿರೋಧಿ ಸರಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಅವರು ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸರಕಾರದ ಈ ನಿಲುವನ್ನು ಖಂಡಿಸಿದ್ದು ವಿಶ್ವ ಮಾರಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಮತ್ತು ರೂಪೈ ಎದುರು ಡಾಲರ್ ಮೌಲ್ಯ ಯಥಾ ಸ್ಥಿತಿ ಕಾಯ್ದುಕೊಂಡಿದ್ದರೂ ಡೀಸೆಲ್ ಪೆಟ್ರೋಲ್ ಬೆಲೆಯನ್ನು ಲೀಟರಿಗೆ ಸರೀ ಸುಮಾರು 28 ಪೈಸೆ ಹಾಗೂ 32 ಪೈಸೆ ಏರಿಸುವ ಔಚಿತ್ಯವಾದರೂ ಏನಿತ್ತು ಎಂದಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಸ್ಥಳೀಯ ವ್ಯತ್ಯಯದೊಂದಿಗೆ ಕನಿಷ್ಠ 92.67 ರಿಂದ ಗರಿಷ್ಠ 97.58 ರೂ. ಏರುಗತಿಯಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಲಿದೆ ಎಂದಿದ್ದಾರೆ.
ರಾಜ್ಯದಲ್ಲಿ2018 ರ ಪ್ರಕೃತಿ ವಿಕೋಪದಡಿ ರೈತರ ಸಾಲ ಮನ್ನಾ ಮಾಡಲು ಹೇರಿದ್ದ ವಿಶೇಷ ಸೆಸ್ಸನ್ನು ಈಗಲೂ ಮುಂದುವರಿಸಲಾಗುತ್ತಿದ್ದು ಅದನ್ನು ಕೂಡಲೇ ತಡೆಹಿಡಿದು ಕೊರೋನಾ ಸಂಕಷ್ಟ ನಿಧಿಗೆ ಆ ಹಣವನ್ನು ವರ್ಗಾಯಿಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ
ಇಂಥ ಸಮಯದಲ್ಲಿ ಬೆಲೆ ಕಡಿಮೆ ಮಾಡುವ ಮಾರ್ಗವನ್ನು ಹುಡುಕಿ
ಯಾಕೆ ಹೀಗೆ ಜನರ ಬದುಕಿನ ಮೇಲೆ ಬರೆ ಹಾಕುವಿರಿ