ಆನ್ಲೈನ್ ಡೆಲಿವರಿ ಸೇವೆಯಲ್ಲಿ ಕೊರೋನಾ ಹರಡಲ್ವಾ- ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್

ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ವಿದೇಶಿ ಆನ್‍ಲೈನ್ ಕಂಪೆನಿಗಳ ಉತ್ಪನ್ನಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸುವುದು ಮತ್ತು ಇವುಗಳಿಗೆ ನೀಡಿರುವ ಆನ್ಲೈನ್ ಡೆಲಿವರಿ ಸೇವೆಯನ್ನು ನಿಲ್ಲಿಸಬೇಕೆಂದು ಆಲ್ ಇಂಡಿಯಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್ ನ ಉಡುಪಿ ಘಟಕ ಸರಕಾರಕ್ಕೆ ಮನವಿ ಮಾಡಿದೆ.

ಈ ಬಗ್ಗೆ ಉಡುಪಿಯಲ್ಲಿ ಅಸೋಸಿಯೇಶನ್ ನ ಉಡುಪಿ ಘಟಕದ ಕಾರ್ಯದರ್ಶಿ ವಿವೇಕ್ ಜಿ. ಸುವರ್ಣ ಮಾಹಿತಿ ನೀಡಿ, ಜನ ಸಾಮಾನ್ಯರ ಸರಕಾರ ನೊಂದ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ಕೊಡದೇ ವಿದೇಶೀ ಆನ್‍ಲೈನ್ ಕಂಪೆನಿಗಳಿಗೆ ಸಹಕಾರ ಕೊಟ್ಟು ಸ್ಥಳೀಯ ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶದಲ್ಲಿ ಈಗಾಗಲೇ ಕೊರೋನಾ ಎರಡನೇ ಅಲೆ ತೀವ್ರವಾಗಿ ಹರಡಿದ್ದು ಸರಕಾರವು ಜನರ ಒಳಿತಿಗಾಗಿ ಕೈಗೊಂಡ ಲಾಕ್ ಡೌನ್ ನಿರ್ಣಯವನ್ನು ಸ್ಥಳೀಯ ವ್ಯಾಪಾರಿಗಳು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಸರಕಾರ ವ್ಯಾಪಾರವನ್ನು ಬಂದ್ ಮಾಡಲು ಸುತ್ತೋಲೆ ಹೊರಡಿಸಿದಾಕ್ಷಣ ಚಾಚೂ ತಪ್ಪದೆ ಪಾಲಿಸುವ ಬಡ ವ್ಯಾಪಾರಿಗಳಿಗೊಂದು ನೀತಿ, ಆನ್ಲೈನ್ ಕಂಪೆನಿಗಳಿಗೊಂದು ನೀತಿ. ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌೀಸ್ಸ್, ಸ್ಯಾನಿಟೈಝರ್ ಮತ್ತು ಯಾವುದೇ ಮುಂಜಾಗ್ರತೆಯನ್ನು ವಹಿಸದೆ ವಿದೇಶಿ ಆನ್ಲೈನ್ ಕಂಪೆನಿಗಳು ಇಂದು ರಾಜಾರೋಷವಾಗಿ ತಮ್ಮ ವ್ಯವಹಾರವನ್ನು ನಡೆಸುತ್ತಿವೆ.

ಈ ಕಂಪೆನಿಗಳಿಂದ ಮನೆಮನೆಗಳಿಗೆ ಪಾರ್ಸೆಲ್ ಗಳು ಬರುತ್ತವೆ. ಆದರೆ ಇದರಿಂದ ಕೊರೋನ ಹರಡುವುದಿಲ್ಲವೇ…? ಸ್ಥಳೀಯ ವ್ಯಾಪಾರಿಗಳು ವ್ಯಾಪಾರ ಮಾಡಿದರೆ ಅಂಗಡಿಗಳನ್ನು ತೆರೆದರೆ ಮಾತ್ರ ಕೊರೋನಾ ಹರಡುವುದೆ? ಇದು ನೇರವಾಗಿ ಮಲತಾಯಿ ಧೋರಣೆಯಂತಿದೆ. ಜನರ ಒಳಿತಿಗಾಗಿ ಲಾಕ್‍ಡೌನ್ ಎಂದು ಮಾಡಿದರೆ ದಯವಿಟ್ಟು ಎಲ್ಲರಿಗೂ ಒಂದೇ ನ್ಯಾಯ ಕೊಟ್ಟು ವಿದೇಶಿ ಆನ್ಲೈನ್ ಕಂಪೆನಿಗಳಿಗೆ ಕೂಡಾ ಲಾಕ್ ಡೌನ್ ಮಾಡಿಸಿ. ಜನರಿಗೆ ಕೊರೋನ ಹರಡುವುದನ್ನು ನಿಲ್ಲಿಸಿ. ಇದಕ್ಕೆ ಸಣ್ಣ ಮೊಬೈಲ್ ವ್ಯಾಪಾರಿಗಳ ಸಂಪೂರ್ಣ ಬೆಂಬಲವಿದೆ. ಆದರೆ ಇಂದು ಕರ್ನಾಟಕ ಸರಕಾರ ಕೇವಲ ಆನ್ಲೈನ್ ಕಂಪೆನಿಗಳಿಗೆ ಮಾತ್ರ ಎಲ್ಲಾ ರೀತಿಯ ಸರಕುಗಳನ್ನು ಸರಬರಾಜು ಮಾಡಲು ಅವಕಾಶ ಕೊಟ್ಟು ವಿದೇಶಿ ಆನ್ಲೈನ್ ಕಂಪೆನಿಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ.

ಸ್ಥಳೀಯ ಮೊಬೈಲ್ ವ್ಯವಹಾರಗಳ ಮೇಲೆ ಎಲ್ಲಾ ಮೊಬೈಲ್ ವಿತರಕರು, ಸಣ್ಣ ಮೊಬೈಲ್ ವ್ಯಾಪಾರಿಗಳು, ಮಾರಾಟ ಅಧಿಕಾರಿಗಳು, ಮಾರಾಟ ಪ್ರವರ್ತಕರು ಮತ್ತು ಅವರ ಕುಟುಂಬಗಳು ಹೆಚ್ಚು ಅವಲಂಬಿತರಾಗಿದ್ದಾರೆ. ಸಣ್ಣ ಮೊಬೈಲ್ ವ್ಯಾಪಾರಿಗಳು ಕಳೆದ ಬಾರಿ ಆದಂತಹ ಲಾಕ್ ಡೌನ್ ಇಂದ ಇನ್ನೂ ಚೇತರಿಸಿಕೊಂಡಿಲ್ಲ. ಈಗಾಗಲೇ ಎರಡನೇ ಕೊರೋನಾ ಅಲೆ ತುಂಬ ದೊಡ್ಡ ಪ್ರಮಾಣದಲ್ಲಿ ಸಣ್ಣ ಮೊಬೈಲ್ ವ್ಯಾಪಾರಿಗಳ ಜೀವನಕ್ಕೆ ಹೊಡೆತ ನೀಡಿದೆ. ಸಣ್ಣ ಮೊಬೈಲ್ ವ್ಯಾಪಾರಿಗಳ ಸಮಸ್ಯೆಗಳನ್ನು ಇಮೇಲ್ ಮತ್ತು ಟ್ವೀಟ್ ಮುಖಾಂತರ ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ಹಿತ ದೃಷ್ಟಿಗಾಗಿ ತಕ್ಷಣ ವಿದೇಶೀ ಆನ್‍ಲೈನ್ ಕಂಪೆನಿಗಳ ವ್ಯಾಪಾರವನ್ನು ಕರ್ನಾಟಕ ರಾಜ್ಯದಲ್ಲಿ ನಿರ್ಬಂಧಿಸಿ ಸ್ಥಳೀಯ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಬೇಕೆಂದು ಸರಕಾರಕ್ಕೆ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭ ಏಮ್ರಾದ ರಾಜ್ಯ ಕಾರ್ಯದರ್ಶಿ ಬಿ.ಸುಹಾಸ್ ಕಿಣಿ, ಏಮ್ರಾ ಉಡುಪಿ ಘಟಕದ ಅಧ್ಯಕ್ಷ ಸಂದೇಶ್ ಬಲ್ಲಾಳ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!