ತುಳು ಚಲನಚಿತ್ರ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ನಿಧನ

ಮಂಗಳೂರು: ತುಳು ಚಲನಚಿತ್ರ ಸಾಹಿತಿ ಮತ್ತು ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

42 ವಯಸ್ಸಿನ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತಾವು ನಿರ್ದೇಶಿಸಿದ್ದ ‘ಅರ್ಜುನ್ ವೆಡ್ಸ್ ಅಮೃತ’ ಎಂಬ ತುಳು ಚಿತ್ರದಲ್ಲಿನ ಉತ್ತಮ ನಿರ್ದೇಶನಾ ಕೌಶಲ್ಯಕ್ಕಾಗಿ ಶೆಟ್ಟಿ ಮೆಚ್ಚುಗೆ ಪಡೆದಿದ್ದರು. ಜೊತೆಗೆ ಹೋಟೆಲ್ ಉದ್ಯಮಕ್ಕೂ ರಘು ಶೆಟ್ಟಿ ಕೈ ಹಾಕಿದ್ದರು.

ಮೂಡುಬಿದಿರೆಯ ಬಂಟರ ಕುಟುಂಬದಲ್ಲಿ ಸೆಪ್ಟೆಂಬರ್ 1,1979 ರಂದು ಜನಿಸಿದ ರಘು ಶೆಟ್ಟಿ ಬೆಳೆದಿದ್ದೆಲ್ಲ ಹುಬ್ಬಳ್ಳಿಯಲ್ಲಿ. ಇವರ ತಂದೆ ಉದ್ಯಮಿ. ಮೂಡುಬಿದಿರೆಯ ಮಹಾವೀರ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ ರಘು ಶೆಟ್ಟಿಗೆ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ‘ಅರ್ಜುನ್ ವೆಡ್ಸ್ ಅಮೃತ’ ಚಿತ್ರದ  ಮೂಲಕ ಕೋಸ್ಟಲ್‌ವುಡ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ರಘು ಶೆಟ್ಟಿ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ಸಕಲ ತಯಾರಿ ನಡೆಸಿದ್ದರು. ಇದಕ್ಕಾಗಿ ನಟ ಕೋಮಲ್ ಜೊತೆಗೆ ಮಾತುಕತೆಯೂ ನಡೆದಿತ್ತು. ಆದರೆ ಅಷ್ಟರಲ್ಲಿ ಬಾರದ ಲೋಕಕ್ಕೆ ರಘು ಶೆಟ್ಟಿ ಪಯಣಿಸಿದ್ದಾರೆ. ರಘು ಶೆಟ್ಟಿ ನಿಧನಕ್ಕೆ ಕೋಸ್ಟಲ್‌ವುಡ್  ಕಂಬನಿ ಮಿಡಿದಿದೆ.
 

Leave a Reply

Your email address will not be published. Required fields are marked *

error: Content is protected !!